ADVERTISEMENT

ಬಂಡವಾಳಶಾಹಿ ಪರ ಕೇಂದ್ರದ ಲಾಬಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:46 IST
Last Updated 9 ನವೆಂಬರ್ 2017, 5:46 IST

ಬಾಗೇಪಲ್ಲಿ: ‘ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿಗಳ ಪರ ಲಾಬಿ ಮಾಡುತ್ತಿದ್ದಾರೆ. ಈ ಹಿಂದೆ ಇದೇ ರೀತಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಕೂಡ ಲಾಬಿ ಮಾಡಿದ್ದರು’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು. ರಷ್ಯಾ ಕ್ರಾಂತಿ ಪ್ರಯುಕ್ತ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ರಷ್ಯಾದ ದೊರೆ ರೈತರು, ವಿದ್ಯಾರ್ಥಿಗಳು, ಜನರು ಮೇಲೆ ನಡೆಸುತ್ತಿದ್ದ ದೌರ್ಜನ್ಯವನ್ನು ಖಂಡಿಸಿ ಜನರು ದಂಗೆ ಎದ್ದು ರಾಜಾಡಳಿತವನ್ನು ಕೊನೆಗಾಣಿಸಿದರು. ಈ ದಂಗೆ ವಿಶ್ವದಲ್ಲೇ ಮನೆ ಮಾತಾಗಿದೆ. ಇದರಿಂದ ಉತ್ತೇಜಿತರಾಗಿ ವಿಶ್ವದಾದ್ಯಂತ ಜನರು ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಲು ಇಂದಿಗೂ ಹೋರಾಟಗಳನ್ನು ರೂಪಿಸುತ್ತಲೇ ಬರುತ್ತಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಬಿಜೆಪಿ, ಆರ್ಎಸ್ಎಸ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಸಿಪಿಎಂನ ಸಾವಿರಾರು ಕಾರ್ಯಕರ್ತರನ್ನು ಕೊಂದು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರ ಭಾಷಣದಲ್ಲಿ ಪ್ರತಿ ವರ್ಷವೂ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಭರವಸೆ ನೀಡಿದ್ದರು. ಚುನಾವಣೆ ನಂತರ ಉದ್ಯೋಗ ಸೃಷ್ಟಿಸುವ ಬದಲು ಉದ್ಯೋಗಗಳಿಗೆ ಕತ್ತರಿ ಹಾಕಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮೋದಿ ಅವರಿಗೆ ಕಾರ್ಪೊರೇಟ್‌ ಕಂಪೆನಿಗಳ ಪರ ಇರುವ ವ್ಯಾಮೋಹ ಬಯಲಾಗಿದೆ. ದೇಶದಲ್ಲಿ ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮಾಡಿರುವ ಸಾಲ ತೀರಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದ್ದರೂ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ’ ಎಂದು ತಿಳಿಸಿದರು.

ಚಿಂತಕ ಡಾ.ಅನಿಲ್ ಕುಮಾರ್, ನಗರ ಘಟಕದ ಅಧ್ಯಕ್ಷ ಅಶ್ವತ್ಥಪ್ಪ, ಜಿಲ್ಲಾ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಚನ್ನರಾಯಪ್ಪ, ಡಿವೈಎಫ್ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ, ಪುರಸಭೆ ಸದಸ್ಯರಾದ ಬಿ.ಎಚ್.ಆರೀಫ್, ಮಹಮದ್ ಆಕ್ರಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಾವಿತ್ರಮ್ಮ, ಮುಖಂಡರಾದ ಆರ್.ಚಂದ್ರಶೇಖರ್ರೆಡ್ಡಿ, ಬಾಬು, ಅಬೂಬಕರ್, ಅಬ್ದುಲ್ ರಶೀದ್, ಆಸೀಫ್, ಸುಮಂತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.