ಚಿಕ್ಕಬಳ್ಳಾಪುರ: ‘ನಮ್ಮ ವ್ಯವಸ್ಥೆ ಇಷ್ಟೊಂದು ಜಡ್ಡುಗಟ್ಟಿ ಹೋಗಿದೆಯೇ ಅಥವಾ ನಾವೇ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹಿಂದುಳಿಯುತ್ತಿದ್ದೇವೆಯೊ ಗೊತ್ತಿಲ್ಲ’. -–ಇದು ಗೌರಿಬಿದನೂರು ತಾಲ್ಲೂಕಿನ ತೇಕಲಹಳ್ಳಿ ಗ್ರಾಮಸ್ಥ ಅಳಲು.
ಚುನಾವಣೆಯಲ್ಲಿ ಮತ ಬಹಿಷ್ಕಾರ ಹಾಕಿದರೂ ಮತ್ತು ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡಿದರೂ ಜಿಲ್ಲಾಡಳಿತದ ಅಧಿಕಾರಿಗಳಾಗಲಿ ಮತ್ತು ಜನಪ್ರತಿನಿಧಿಯಾಗಲಿ ಯಾರೊಬ್ಬರೂ ನಮ್ಮನ್ನು ಭೇಟಿ ಮಾಡಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಬಗ್ಗೆ ಅಪನಂಬಿಕೆಗೆ ಈಡಾಗಿರುವ ಅವರು, ಸಾಮಾಜಿಕ ವ್ಯವಸ್ಥೆಗೆ ಸವಾಲಾಗುತ್ತಿದ್ದಾರೆ. ವ್ಯವಸ್ಥೆ ಸರಿಯಾಗಬೇಕು ಇಲ್ಲವೇ ನಮ್ಮ ಪಾಡಿಗೆ ಬದುಕಲು ಬಿಡಬೇಕು ಎಂಬ ದೋರಣೆ ಅವರಲ್ಲಿ ಮೊಳೆಯತೊಡಗಿದೆ.
‘ಮೊದಲನೇ ಸಲ ಚುನಾವಣೆೆ ಬಹಿಷ್ಕರಿಸಿದ್ದೇವೆ. ಬಹು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳನ್ನು ಇಷ್ಟು ಕಾಲ ಸಹಿಸಿಕೊಂಡೇ ತುಂಬಾ ತಪ್ಪು ಮಾಡಿಬಿಟ್ಟೆವು. ಅದಕ್ಕೆ ಬಂದದ್ದೆಲ್ಲ ಎದುರಿಸಿಕೊಂಡೇ ಗ್ರಾಮಕ್ಕೆ ಕೆಲಸ ಮಾಡಿಸಿಕೊಳ್ಳೋಣವೆಂದೇ ಈ ಸಲ ಮತ ಚಲಾಯಿಸಲಿಲ್ಲ’ ಎಂದು ಅವರು ತಿಳಿಸಿದರು.
‘ಮನೆಗಳಲ್ಲಿ ಶೌಚಾಲಯ ಇಲ್ಲ. ಬೆಟ್ಟ, ಗುಡ್ಡ, ಕಳೆಗಿಡಗಳು ಇರುವ ಈ ಪ್ರದೇಶದಲ್ಲಿ ಬಹಿರ್ದೆಸೆಗೆ ಹೇಗೆ ಹೋಗಬೇಕು? ನಮ್ಮ ಸುರಕ್ಷತೆಯ ಜವಾಬ್ದಾರಿ ಯಾರು ಹೊರುತ್ತಾರೆ? ಪ್ರಾಣಿಗಳು ದಾಳಿ ಮಾಡಿದರೆ, ಏನು ಗತಿ? ಗುಡಿಸಲುಗಳಲ್ಲಿರುವ ನಮಗೆ ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವೇ’ ಎಂದು ಮಹಿಳೆಯರು ಹೇಳಿದರು.
ಅಂದಹಾಗೆ, ಈ ಎಲ್ಲ ಮಾತುಗಳಿಗೂ ಕಿವಿಯಾದವರು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ. ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ‘ಗ್ರಾಮಸ್ಥರು ಮತ ಬಹಿಷ್ಕಾರ ಮಾಡಿದ ವಿಷಯ ತಿಳಿದು ಇಲ್ಲಿ ಬಂದಿದ್ದೇನೆ. ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೋರಾಟದ ಮೂಲಕವೇ ಸೌಕರ್ಯ ಪಡೆದುಕೊಳ್ಳಬೇಕಿದೆ’ ಎಂದರು. ಸಿಪಿಎಂ ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಸಿದ್ದಗಂಗಪ್ಪ, ರವಿಚಂದ್ರರೆಡ್ಡಿ, ಅಶ್ವತ್ಥಪ್ಪ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.