ADVERTISEMENT

ಹೈನುಗಾರಿಕೆ ಕ್ಷೇತ್ರ ಬಲಪಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:38 IST
Last Updated 2 ಫೆಬ್ರುವರಿ 2017, 6:38 IST
ಹೈನುಗಾರಿಕೆ ಕ್ಷೇತ್ರ ಬಲಪಡಿಸಲು ಸಲಹೆ
ಹೈನುಗಾರಿಕೆ ಕ್ಷೇತ್ರ ಬಲಪಡಿಸಲು ಸಲಹೆ   
ಶಿಡ್ಲಘಟ್ಟ: ಅತ್ಯಂತ ಕಡಿಮೆ ಬೆಲೆಗೆ ಜನ ಸಾಮಾನ್ಯರ ಕೈಗೆಟುಕುವಂತೆ ತಯಾರಿಸಿರುವ ನಂದಿನಿ ಹಾಲಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಹೈನುಗಾರಿಕೆ ಕ್ಷೇತ್ರ ಮತ್ತು ರೈತರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
 
ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ಬುಧವಾರ ನೂತನವಾಗಿ ನಿರ್ಮಿಸಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
 
ಮಾರುಕಟ್ಟೆಯಲ್ಲಿ ನಾನಾ ಬಗೆಯ ಉತ್ಪನ್ನಗಳು ಬಣ್ಣ ಬಣ್ಣದ ಪ್ಯಾಕೇಟ್‌ಗಳಲ್ಲಿ ಲಭ್ಯ ಇವೆ. ಆದರೆ ಅವುಗಳನ್ನು ಲಾಭದ ದೃಷ್ಟಿಯಿಂದಷ್ಟೇ ಉತ್ಪಾದಿಸಿದ್ದು, ಅವುಗಳನ್ನು ಖರೀದಿಸಿ ಸೇವಿಸುವುದರಿಂದ ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ಸಿಗಬಹುದು. ಆದರೆ ಅವುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
 
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಎಲ್ಲಾ ವಯೋಮಾನದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ ಎಂದರು. 
 
ನಂದಿನಿ ಹಾಲಿನ ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದ್ದು ರುಚಿ, ಶುಚಿಯಾಗಿಯೂ ಇರುತ್ತದೆಯಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ ನಂದಿನಿ ಉತ್ಪನ್ನಗಳ ಸೇವನೆ ಬಹಳ ಮುಖ್ಯ ಎಂದು ಹೇಳಿದರು.
 
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ನಂದಿನಿ ಹಾಲು, ಮಜ್ಜಿಗೆ, ಮೊಸರು, ಪೇಡ ಇನ್ನಿತರೆ ಉತ್ಪನ್ನಗಳು ಬಹಳ ಕಡಿಮೆ ಬೆಲೆಗೆ ಇಲ್ಲಿ ಸಿಗಲಿವೆ. ಇವುಗಳನ್ನು ಖರೀದಿಸುವುದರಿಂದ ನಾವು ಹೈನುಗಾರಿಕೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ.
 
ಬೇರೆ ಬೇರೆ ಬ್ರಾಂಡ್‌ಗಳ ವಸ್ತುಗಳಿಗಿಂತಲೂ ನಂದಿನಿ ಬ್ರಾಂಡ್‌ನ ಉತ್ಪನ್ನಗಳು ಆರೋಗ್ಯ ಹಾಗೂ ಬೆಲೆ ದೃಷ್ಟಿಯಿಂದಲೂ ಉತ್ತಮವಾಗಿದ್ದು ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸಹಕಾರ ಕ್ಷೇತ್ರ ಹಾಗೂ ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.  ಮಾರುಕಟ್ಟೆ ಉಪ ವ್ಯವಸ್ಥಾಪಕ ರತ್ನಯ್ಯಶೆಟ್ಟಿ, ಸ್ಥಳೀಯ ಶಿಬಿರ ಘಟಕದ ವ್ಯವಸ್ಥಾಪಕ ಹನುಮಂತರಾವ್, ಮುನಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.