ADVERTISEMENT

ಕ್ಯಾತನಮಕ್ಕಿಯಲ್ಲಿ ಬೀಡಾಡಿ ದನಗಳು

ರವಿ ಕೆಳಂಗಡಿ
Published 19 ನವೆಂಬರ್ 2017, 4:57 IST
Last Updated 19 ನವೆಂಬರ್ 2017, 4:57 IST

ಕಳಸ: ಬಲಿಗೆ ಸಮೀಪದ ಕ್ಯಾತನಮಕ್ಕಿ ಗುಡ್ಡದಲ್ಲಿ ನೂರಾರು ಸಂಖ್ಯೆಯಲ್ಲಿ ಮೇಯುವ ವಾರಸುದಾರರೇ ಇಲ್ಲದ ಜಾನುವಾರುಗಳಿಂದ ಈ ಗ್ರಾಮಗಳ ಜಾನುವಾರುಗಳಿಗೆ ಕಾಲು ಬಾಯಿ ರೋಗ ಬಂದಿದೆ.

ರೋಗಪೀಡಿತ ಜಾನುವಾರುಗಳ ವಸಡಿನಲ್ಲಿ ಮತ್ತು ಗೊರಸಿನಲ್ಲಿ ರಕ್ತಸ್ರಾವ ಆಗುತ್ತಿದೆ. ವಯಸ್ಸಾದ ಜಾನುವಾರುಗಳು ಓಡಾಡಲಾರದೆ ಆಹಾರವನ್ನೂ ತಿನ್ನಲಾರದೆ ನಿತ್ರಾಣವಾಗಿವೆ.

ಕಳಸ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಬಲಿಗೆ ಮತ್ತು ಹೊರನಾಡು ಗ್ರಾಮ ಪಂಚಾಯಿತಿಯ ದಂಟಗ, ತುರ ಮತ್ತಿತರ ಪ್ರದೇಶದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಬಾಧೆ ಕಂಡು ಬಂದಿದೆ.

ADVERTISEMENT

ಈ ಪ್ರದೇಶದಲ್ಲಿ ಇರುವ ಸಾಂಪ್ರ ದಾಯಿಕ ಮಲೆನಾಡು ಗಿಡ್ಡ ಸ್ಥಳೀಯ ತಳಿಗೂ ಈ ರೋಗ ತಗುಲಿ ರುವುದು ಅಚ್ಚರಿ ಆಗಿದೆ. ಹಾಲು ಕರೆಯುತ್ತಿದ್ದ ಹಸುಗಳು ಮತ್ತು ಉಳುಮೆಗೆ ಬಳಸುತ್ತಿದ್ದ ಎತ್ತು– ಕೋಣಕ್ಕೆ ಕಾಲುಬಾಯಿ ರೋಗ ಬಂದಿರುವುದು ಕೃಷಿಕರ ಆತ್ಮವಿಶ್ವಾಸ ಕುಂದಿಸಿದೆ.

ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಬಲಿಗೆಗೆ ಭೇಟಿ ನೀಡಿ ರೋಗದ ತೀವ್ರತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಜಾನುವಾರಿನ ಜತೆಗೆ ಕ್ಯಾತನಮಕ್ಕಿಯ ಹಸುಗಳೂ ಸೇರುವುದರಿಂದ ಈ ರೋಗ ಹರಡಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೇಣುಗೋಪಾಲ್‌ ಹೇಳುತ್ತಾರೆ.

ಗ್ರಾಮಸ್ಥರು ಸಾಕಿರುವ ಎಲ್ಲ ಜಾನುವಾರುಗಳಿಗೂ ಕಾಲುಬಾಯಿ ಲಸಿಕೆ ಹಾಕುತ್ತೇವೆ. ಆದರೆ ಗುಡ್ಡದಲ್ಲಿ ಮೇಯುವ ಪರ ಊರುಗಳ ನೂರಾರು ಜಾನುವಾರುಗಳಿಗೆ ಲಸಿಕೆ ಹಾಕುವುದು ಕಷ್ಟ ಎಂದು ಅವರು ಹೇಳುತ್ತಾರೆ.

ಯಾವುದೇ ನಿರ್ಬಂಧ ಇಲ್ಲದಂತೆ ಸರಕು ಸಾಗಣೆ ವಾಹನಗಳಲ್ಲಿ ಕ್ಯಾತನ ಮಕ್ಕಿಗೆ ಜಾನುವಾರುಗಳನ್ನು ತಂದು ಬಿಡುತ್ತಿರುವುದರಿಂದ ರೋಗ ನಿಯಂತ್ರ ಣ ಕಷ್ಟವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ರೋಗನಿರೋಧಕ ಶಕ್ತಿಯಿಂದ ಈವರೆಗೂ ಬಲಿಷ್ಟವಾಗಿದ್ದ ಬಲಿಗೆಯ ದನಗಳಿಗೆ ಪೇಟೆಯ ದನಗಳಿಂದ ಕಾಲುಬಾಯಿ ರೋಗ ಹರಡಿದೆ. ಕ್ಯಾತನಮಕ್ಕಿಯಲ್ಲಿ ವರ್ಷವಿಡೀ ಹುಲ್ಲು ಮತ್ತು ನೀರು ಸಿಗುವುದೇ ಬಲಿಗೆಯ ದನಗಳಿಗೆ ಈಗ ಶಾಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.