ADVERTISEMENT

ಗೋಮಾಳ– ಅರಣ್ಯ ಜಮೀನು: ಜಂಟಿ ಸರ್ವೇ

ಸಚಿವ ಕಾಗೋಡು ತಿಮ್ಮಪ್ಪ ದಿಢೀರ್ ಭೇಟಿ: ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 7:13 IST
Last Updated 28 ಡಿಸೆಂಬರ್ 2017, 7:13 IST

ಕಡೂರು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಡೂರು ತಾಲ್ಲೂಕು ಕಚೇರಿಗೆ ಸಂಜೆ ದಿಢೀರ್ ಭೇಟಿ ನೀಡಿ ಕಚೇರಿಯ ಬಳಿ ಇದ್ದ ಹಲವರನ್ನು ಆತ್ಮೀಯವಾಗಿ ಮಾತನಾಡಿಸಿದರು.

‘ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ಕುಟುಂಬಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ನಿವೇಶನವನ್ನು ಸಕ್ರಮಗೊಳಿಸಲು ಸರ್ಕಾರ ಅವಕಾಶ ನೀಡಿದ್ದು, ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಆರಂಭವಾಗಿದೆ. ನಿಯಮಗಳಿಗೆ ಅನುಸಾರವಾಗಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ನಿವೇಶನವನ್ನು ಸಕ್ರಮ ಮಾಡಿಕೊಡಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಎಂ. ಭಾಗ್ಯ ಅವರಿಗೆ ಸೂಚಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಗೋಮಾಳ-ಅರಣ್ಯ ಎಂದು ಪಹಣಿಯಲ್ಲಿ ನಮೂದಾಗಿರುವ ಪ್ರದೇಶಗಳನ್ನು ಜಂಟಿ ಸರ್ವೆ ಮಾಡಿಸಿ ಅರಣ್ಯವನ್ನು ಹೊರತು ಪಡಿಸಿ ಗೋಮಾಳದ ಜಮೀನನ್ನು ನಿಯಮದಡಿ ರೈತರಿಗೆ ವಿಲೇ ವಾರಿ ಮಾಡಲು ಸೂಚಿಸಿದರು.

ADVERTISEMENT

ತಹಶೀಲ್ದಾ ರ್ ಭಾಗ್ಯ ಅ ವರು ತಾಲ್ಲೂಕು ಬಗರ್ ಹುಕುಂ ಸಮಿತಿಯ ಸಭೆಯ ವಿವರಗಳನ್ನು ಸಚಿವರಿಗೆ ನೀಡಿ  ‘ಜನವರಿ 5 ರಂದು ಕಡೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವ ರಿಂದ 500 ಜನ ಬಗರ್‍ಹುಕುಂ ಸಾಗುವಳಿದಾ ರರಿಗೆ ಸಾಗುವಳಿ ಪತ್ರ ನೀಡಲು ಶಾಸಕ ವೈ.ಎಸ್.ವಿ.ದತ್ತ ಸೂ ಚನೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಉಳಿದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್. ಮಹೇಶ್‍ ಒಡೆಯರ್ ಅವರು, 4 ವರ್ಷಗಳಿಂದ ಕಡೂರು ಬರಪೀಡಿತವಾಗಿದ್ದು,  ಕೃಷಿ ಇಲಾಖೆಯ ವರದಿ ಪ್ರಕಾರವೂ ಈ ವರ್ಷ ಮಳೆಯ ಕೊರತೆಯಾಗಿದೆ. ಈಗಲೂ ಹಲವಾರು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಕೊಡಲಾಗುತ್ತಿದ್ದು, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದ್ದು, ಕಡೂರನ್ನು ಬರಪೀಡಿತ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು, ಅಲ್ಲದೇ ಹಲವೆಡೆ ಕಂದಾಯ ಜಮೀನು ಅರಣ್ಯ ಎಂದು ನಮೂದಾಗಿದೆ. ಇದನ್ನು ಸರಿಪಡಿಸಿ ಆ ಜಮೀನುಗಳನ್ನು ಬಗರ್‍ಹುಕುಂ ಸಾಗುವಳಿದಾರರಿಗೆ ನೀಡಲು ಆದೇಶಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಕೆ.ಎಸ್ ಆನಂದ್ ಅವರು, ‘ಸರ್ಕಾರದಿಂದ ಈ ಹಿಂದೆ ಸಾಗುವಳಿ ಚೀಟಿ ಪಡೆದ ಸಾಗುವಳಿದಾರರಿಗೆ ಮಂಜೂರಾದ ಜಮೀನನ್ನು ಇನ್ನೂ ದುರಸ್ತಿ ಮಾಡಿಲ್ಲ. ಇದಕ್ಕೆ ಮೂಲ ಕಡತ ಅಗತ್ಯವಾಗಿದ್ದು, ಆದರೆ ಆ ಕಡತಗಳು ತಾಲ್ಲೂಕು ಕಚೇರಿಯಲ್ಲಿ ಲಭ್ಯವಿಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ “ಮಿಸ್ಸಿಂಗ್ ಫೈಲ್” ಎಂಬ ಕಾರಣ ನೀಡಿ ದುರಸ್ತಿ ಮಾಡಲು ಅವಕಾಶ ಇರುತ್ತದೆ.

‘ನಾಲೈದು ವರ್ಷಗಳಿಂದ ಈ ಕಾರ್ಯವನ್ನು ಮಾಡಿಲ್ಲ. ಇದನ್ನು ರೈತರ ಹಿತದೃಷ್ಟಿಯಿಂದ ಶೀಘ್ರವಾಗಿ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು’ ಎಂದು ಸಚಿವರನ್ನು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಕುರಿತು ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು. ನಂತರ ಸಚಿವರು ಕಚೇರಿಯ ಆವರಣದಲ್ಲಿ ಹಲವು  ಬಗರ್ ಹುಕುಂ ಸಾಗುವಳಿದಾರರನ್ನು ಮಾತನಾಡಿಸಿ ಶಿವಮೊಗ್ಗಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.