ADVERTISEMENT

ತಳ ಮುಟ್ಟಿದ ಯಗಚಿ ಜಲಾಶಯ

ನೀರು ಪೂರೈಕೆಗೆ ಅಡ್ಡಿ, ಅರಸೀಕೆರೆ ತಾಲ್ಲೂಕಿಗೆ ವಾರದಲ್ಲಿ ನೀರು ಬಂದ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 5:08 IST
Last Updated 4 ಫೆಬ್ರುವರಿ 2017, 5:08 IST
ಬೇಲೂರು: ಇಲ್ಲಿನ ಯಗಚಿ ಜಲಾಶಯ ದಲ್ಲಿ ನೀರು ತಳಮುಟ್ಟಿದ್ದು, ಕುಡಿಯುವ ನೀರಿಗೆ ಧಕ್ಕೆಯಾಗಲಿದೆ.
 
ಜಾಕ್‌ವೆಲ್‌ಗೆ ನೀರು ಹರಿಯದೆ ಅರಸೀಕೆರೆ ತಾಲ್ಲೂಕಿನ 58 ಗ್ರಾಮಗಳಿಗೆ ಒಂದು ವಾರವಷ್ಟೇ ನೀರು ಪೂರೈಕೆ ಯಾಗುವ ಸಂಭವವಿದೆ.
 
ಮೂರು ವರ್ಷಗಳ ಸತತ ಬರದಿಂದ ಜಲಾಶಯಕ್ಕೆ ನೀರು ಹರಿವು ತಗ್ಗಿದೆ. 2015ರಲ್ಲಿ ಅಣೆಕಟ್ಟೆ ಭರ್ತಿ ಆಗಿದ್ದರೂ, ಕ್ರೆಸ್ಟ್‌ಗೇಟ್‌ ಮೂಲಕ ನೀರು ಹರಿಸಿರ ಲಿಲ್ಲ. 2016ಲ್ಲಿ ಜಲಾಶಯಕ್ಕೆ ನೀರು ಹರಿವು ಇರಲಿಲ್ಲ. ಈ ಅಣೆಕಟ್ಟೆಯಿಂದ ಬೇಲೂರು, ಚಿಕ್ಕಮಗಳೂರು ಮತ್ತು ಅರಸೀಕೆರೆ ತಾಲ್ಲೂಕಿನ 58 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. 
 
ಅಣೆಕಟ್ಟೆಯ ಗರಿಷ್ಠ ಮಟ್ಟ 964.603 ಮೀಟರ್‌. ಗುರುವಾರ ಅಣೆ ಕಟ್ಟೆಯಲ್ಲಿ ನೀರಿನ ಸಂಗ್ರಹ 956.60 ಮೀ. ಇತ್ತು. ಜಲಾಶಯದ ತಳಮಟ್ಟ 945 ಮೀ.ಗಳಾಗಿದ್ದು 954 ಮೀ.ವರೆಗೆ ಮುಟ್ಟುವವರೆಗೂ ಕೃಷಿ ಉದ್ದೇಶಕ್ಕಾಗಿ ನೀರು ಹರಿಸಬಹುದಾಗಿದೆ.
 
ಬೇಲೂರು ಹಾಗೂ ಚಿಕ್ಕಮಗಳೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈ ಸುವ ಜಾಕ್‌ವೆಲ್‌ನಲ್ಲಿ 948 ಮೀ. ವರೆಗೆ ನೀರನ್ನು ಎತ್ತಬಹುದು. ಬೇಲೂರು ಹಾಗೂ ಚಿಕ್ಕಮಗಳೂರು ಪಟ್ಟಣಗಳಿಗೆ ಜೂನ್‌ ಅಂತ್ಯದವರೆಗೆ ಕುಡಿಯುವ ನೀರು ಪೂರೈಕೆಗೆ ಮಾಡಬಹುದಾಗಿದೆ.
 
ಜೂನ್‌ ನಂತರ ಮಳೆ ಬರದಿದ್ದರೆ, ಎರಡೂ ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. 3.60 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಯಗಚಿ ಜಲಾಶಯದಲ್ಲಿ ಈಗ 0.768 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಡೆಡ್‌ ಸ್ಟೋರೇಜ್‌ ನೀರಿನ ಪ್ರಮಾಣ 0.364 ಟಿಎಂಸಿ ಅಡಿ ನೀರು. 0.404 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.
 
ಬೇಲೂರು–ಚಿಕ್ಕಮಗಳೂರು ಪಟ್ಟಣ ಗಳಿಗೆ ಜೂನ್‌ ಅಂತ್ಯದವರೆಗೆ 0.18 ಟಿಎಂಸಿ ನೀರು ಅಗತ್ಯ. ಮಳೆಬಾರದಿದ್ದರೆ ಜೂನ್‌ ಅಂತ್ಯದ ವೇಳೆಗೆ ಅಣೆಕಟ್ಟೆ ಸಂಪೂರ್ಣ ಬರಿದಾಗಲಿದೆ.
 
ಇದೇ ಮೊದಲು: ಯಗಚಿ ಜಲಾಶಯ ನಿರ್ಮಾಣದ ಬಳಿಕ ಇದೇ ಮೊದಲಿಗೆ ನೀರಿನ ಸಂಗ್ರಹ ತಳಕಂಡಿದೆ. ಇದು ಬೇಲೂರು ಮತ್ತು ಚಿಕ್ಕಮಗಳೂರು ನಗರದ ಜನರ ಆತಂಕಕ್ಕೆ ಕಾರಣ ವಾಗಿದೆ. ಏಪ್ರಿಲ್‌–ಮೇ ತಿಂಗಳಿನಲ್ಲಿ ಮಳೆ ಬಾರದಿದ್ದರೆ, ಎರಡೂ ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರದ ನಿರ್ಮಾಣವಾಗಲಿದೆ.
 
**
ಯಗಚಿ ಅಣೆಕಟ್ಟೆಯಲ್ಲಿ ನೀರಿನ ಭಾರಿ ಕುಸಿತ ಇದೆ. ಇದು ಬೇ ಲೂರು, ಚಿಕ್ಕಮಗಳೂರು ಪಟ್ಟಣ ಮತ್ತು ಅರಸೀಕೆರೆಗಳಲ್ಲಿ ಕುಡಿಯುವ ನೀರು ಪೂರೈಕೆ ಮೇಲೆ ಪರಿಣಾಮ ಬೀರಲಿದೆ
-ಶಿವಕುಮಾರ್‌
ಎಂಜಿನಿಯರ್‌, ಯಗಚಿ ಯೋಜನೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.