ಚಿಕ್ಕಮಗಳೂರು: ‘ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನಲ್ಲಿನ ಬೆಳೆನಾಶ ಮಾಡಿ ಜಾತಿ ನಿಂದನೆ ಮಾಡಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ಎಂದು ಖಾಂಡ್ಯಾ ಹೋಬಳಿ ಬೊಗಸೆ ಗ್ರಾಮದ ಬಿ.ಜಿ.ಸಿದ್ದಯ್ಯ ಅವರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
‘ನಾನು ದಲಿತನಾಗಿದ್ದು ಗ್ರಾಮ ಸ.35ರಲ್ಲಿ ಮೂರು ಎಕರೆ ಒಂಬತ್ತು ಗುಂಟೆ ಜಮೀನಿದೆ. 2005ರಲ್ಲಿ ಅಕ್ರಮ ಸಕ್ರಮದಡಿ ಈ ಜಮೀನು ಮಂಜೂರಾಗಿತ್ತು. ಜಮೀನಿನಲ್ಲಿ ಕಾಫಿ, ಮೆಣಸು, ಸಿಲ್ವರ್, ಬಾಳೆ ಬೆಳೆಯಲಾಗಿದೆ. ಸೆ.6ರಂದು ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನಲ್ಲಿನ ಬೆಳೆ ನಾಶ ಮಾಡಿದ್ದಾರೆ.
ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ದೌರ್ಜನ್ಯ ಕಾಯ್ದೆಯಡಿ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಲೇಮನೆ ಶಂಕರ್, ಬೊಗಸೆ ನಾಗೇಶ್, ಉಮೇಶ್, ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.