ADVERTISEMENT

ಮಾತಿನ ಭರದಲ್ಲಿ ಪದ ಬಳಕೆಯಲ್ಲಿ ತಪ್ಪಾಗಿದೆ: ಜೀವರಾಜ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:17 IST
Last Updated 8 ಸೆಪ್ಟೆಂಬರ್ 2017, 9:17 IST
ಡಿ.ಎನ್‌.ಜೀವರಾಜ್‌
ಡಿ.ಎನ್‌.ಜೀವರಾಜ್‌   

ಚಿಕ್ಕಮಗಳೂರು: ‘ಕೊಪ್ಪದಲ್ಲಿ ಬೈಕ್‌ ರ‍್ಯಾಲಿ ಸಭೆಯಲ್ಲಿ ಭಾಷಣ ಮಾಡುವಾಗ ಮಾತಿನ ಭರದಲ್ಲಿ ಗಡಿಬಿಡಿಯಲ್ಲಿ ಪದ ಬಳಕೆಯಲ್ಲಿ ತಪ್ಪಾಗಿದೆ, ಹೀಗಾಗದಂತೆ ಮುಂದೆ ಎಚ್ಚರ ವಹಿಸುತ್ತೇನೆ’ ಎಂದು ಶಾಸಕ ಡಿ.ಎನ್‌.ಜೀವರಾಜ್‌ ಇಲ್ಲಿ ಗುರುವಾರ ಸಮಜಾಯಿಷಿ ನೀಡಿದರು.

‘ಚೆಡ್ಡಿಗಳ ಮಾರಣ ಹೋಮ’ ಅಂತ ಗೌರಿ ಲಂಕೇಶ್‌ ಅವರು ತಮ್ಮ ಪತ್ರಿಕೆಯಲ್ಲಿ ಬರೆಯದೆ ಇದ್ದಿದ್ದರೆ ಅವರು ಉಳಿಯುತ್ತಿರಲಿಲ್ಲವಾ? ಎಂಬ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಭಾಷಣಕ್ಕೆ ಸಮಯ ಕಡಿಮೆ ಇತ್ತು, ಹೀಗಾಗಿ ವೇಗವಾಗಿ ಮಾತನಾಡುವಾಗ ಪದ ಬಳಕೆಯಲ್ಲಿ ವ್ಯತ್ಯಯವಾಗಿದೆ. ಯಾವುದೇ ಕೆಟ್ಟ ಉದ್ದೇಶದಿಂದ ಮಾತನಾಡಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 11 ಮಂದಿ ಹಿಂದೂಗಳ ಹತ್ಯೆಯಾಗಿದೆ. ಪತ್ರಕರ್ತೆ ಗೌರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯತೆ ಹೊಂದಿದ್ದರು. ಹತ್ಯೆ ಮಾಡಿದವರನ್ನು ಬಂಧಿಸಬೇಕು ಎಂದು ಪತ್ರಿಕೆ ಮೂಲಕ ಅವರು ಸರ್ಕಾರಕ್ಕೆ ಒತ್ತಡ ಹೇರಬಹುದಿತ್ತು.

ADVERTISEMENT

ಈ ಸಾವುಗಳನ್ನು ವಿರೋಧಿಸಬೇಕಿತ್ತು. ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಸೇರಿದಂತೆ ಎಲ್ಲ ಹತ್ಯೆಗಳ ಹಂತಕರನ್ನು ಬಂಧಿಸಿ ಶಿಕ್ಷೆ ವಿಧಿಸಿದ್ದರೆ, ಮತ್ತೆ ಇಂಥ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ.

ಗೌರಿ ಅವರ ಹತ್ಯೆ ನಡೆಯುತ್ತಿರಲಿಲ್ಲ ಎಂದು ಭಾಷಣದಲ್ಲಿ ಹೇಳಿದ್ದೆ, ಗೌರಿ ಅವರ ಹತ್ಯೆಯೂ ಸೇರಿದಂತೆ 11 ಹಿಂದೂಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದೆ’ ಎಂದು ತಿಳಿಸಿದರು. ‘ಗೌರಿ ಅವರ ಸಾವಿನಿಂದ ನನಗೂ ತುಂಬಾ ನೋವಾಗಿದೆ. ಸಾವಿನಲ್ಲಿ ಸಂಭ್ರಮಪಡುವ ವಿಕೃತಿಯ ಮನಸ್ಥಿತಿ ನನಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.