ಅಜ್ಜಂಪುರ: ಒಂದಿಚೂ ಇಂಬಿಲ್ಲದಂತೆ ಬೆಳೆದಿರುವ ಜಾಲಿ ಮರಗಳು, ಅವುಗಳ ಕೆಳಗೆ ಉದುರಿದ ಚೂಪಾದ ಮುಳ್ಳು ಗಳು, ಅಲ್ಲಿಯೇ ಎಸೆದ ಹಳೆಯ ಹಾಸಿಗೆ, ಬಟ್ಟೆಗಳು, ಒಂದರ ಪಕ್ಕದಲ್ಲಿ ಮತ್ತೊಂದು ಅಗೆದು-ಮುಚ್ಚಿದ ಗುಂ ಡಿಗಳು, ಗುಂಡಿಗಳ ಮೇಲೊಂದು ಕಲ್ಲು.... ಇದು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಕಂಡು ಬರುವ ಚಿತ್ರಣ.
ಸ್ಮಶಾನ ಎಂದೊಡನೇ, ಅಲ್ಲೊಂದು ಸೂಚನಾ ನಾಮಫಲಕ. ಇಡೀ ಭಾಗದಲ್ಲಿ ಅನುಪಯುಕ್ತ ಗಿಡ-ಗೆಂಟೆಗಳ ಹೊರತಾದ ಪ್ರದೇಶ, ಶವ ಹೂಳಲು ಅಗತ್ಯ ಸ್ವಚ್ಛತೆ, ಶವ ಸಂಸ್ಕಾರಕ್ಕೂ ಮೊದಲು ಮಳೆ, ಬಿಸಿಲಿನಿಂದ ಶವ ಇರಿಸಿಕೊಳ್ಳಲು ಮತ್ತು ಸಾಂಪ್ರದಾಯಿಕ ಪೂಜೆ ನಡೆಸಲು ಅವಕಾಶ ಇರುವ ಶೆಡ್, ಶವ ಸಂಸ್ಕಾರಕ್ಕೆ ಬಂದವರಿಗೆ ಅನುಕೂಲ ಆಗುವಂತೆ ಕೊಳವೆ ಬಾವಿ ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಹೊಂದಿರಬೇಕೆಂಬುದು ಸಾರ್ವಜನಿಕ ಬೇಡಿಕೆ.
ಪಟ್ಟಣದ ಜನಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮವೂ ಅಭಿವೃದ್ಧಿಯಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಆದರೆ ಗ್ರಾಮದ ಸ್ಮಶಾನಗಳು ಮನುಷ್ಯರು ಒಳ ಹೋಗದಷ್ಟು ಪ್ರಮಾಣದ ಮುಳ್ಳಿನ ಪೊದೆಗಳ ತಾಣವಾಗಿ ಮಾರ್ಪಟ್ಟಿವೆ.
ಇಲ್ಲಿನ ಜಾಲಿ ಮರಗಳು, ಮುಳ್ಳು ಗಳಿಂದಾಗಿ ಸಂಬಂಧಿಕರು, ಶವಗಳನ್ನು ಸ್ಮಶಾನದೊಳಗೆ ಸಾಗಿಸದಂತಾಗಿದೆ. ಇದರಿಂದಾಗಿ ಶವಗಳನ್ನು ಸ್ಮಶಾನದ ಪ್ರವೇಶ ಭಾಗದಲ್ಲಿಯೇ ಊಳುತ್ತಿದ್ದಾರೆ. ಪದೇ-ಪದೇ ಅಂಚಿನಲ್ಲಿ ಶವ ಊಳಲು ತೆಗೆಯುವ ಗುಂಡಿಗಳಲ್ಲಿ ಮೊದಲು ಹೂಳಿದ್ದ ಶವಗಳ ತಲೆ ಬುರುಡೆ, ಮೂಳೆಗಳು ಕಾಣಸಿಗುತ್ತವೆ. ಇವುಗಳನ್ನು ಬೇರೆಡೆ ಎಸೆದು, ಶವಗಳನ್ನು ಸಂಸ್ಕಾರ ಮಾಡುವ ದುಃಸ್ಥಿತಿ ಎದುರಾಗಿದೆ.
ಪಟ್ಟಣದ ತುಂಬೆ ಹಳ್ಳದ ಬಳಿ 1.32 ಎಕರೆ ಗುಂಡುತೋಪು, 1.08 ಎಕರೆ ಗುಂಪುತೋಪು, ರೈಲ್ವೆ ಲೆವಲಿಂಗ್ ಕ್ರಾಸ್ ಬಳಿ 0.27 ಎಕರೆ, 1.09 ಎಕರೆ ಗುಂಪುತೋಪು ಎಂದು ನಮೂದಾ ಗಿರುವ ಭೂಮಿಯಲ್ಲಿ ಹಿಂದಿನಿಂದಲೂ ಪಟ್ಟಣದಲ್ಲಿ, ಸತ್ತವರನ್ನು ಹೂಳುವ ತಾಣವಾಗಿಸಿ ಬಳಸಿಕೊಳ್ಳಲಾಗಿದೆ.
ಆದರೆ ಈ ಭೂಮಿ ಪಂಚಾಯಿತಿಯ ಕಡೆತಗಳಲ್ಲಿ ಗುಂಡು, ಗುಂಪು ತೋಪು ಎಂಬುದಾಗಿಯೇ ಹೊರತು, ಹಿಂದೂ ಸ್ಮಶಾನ ಎಂಬ ಖಾತೆಯಾಗಿ ಪರಿವರ್ತ ನೆಯಾಗಿಲ್ಲ.
ಅಲ್ಲದೇ ಇದುವೆರೆಗೂ ಸ್ಮಶಾನ ಭೂಮಿ ಸರ್ವೆ ಆಗಿಲ್ಲ. ಇದರಿಂದ ಸ್ಮಶಾನ ಭೂಮಿ ಪೂರ್ಣವಾಗಿ ಉಳಿದಿದೆಯಾ? ಒತ್ತುವರಿ ಆಗಿದೆಯಾ? ಎಂಬ ಬಗ್ಗೆ ಸ್ಥಳೀಯ ಆಡಳಿತದಲ್ಲಿ ಯಾವುದೇ ಸ್ಪಷ್ಟ ಉತ್ತರ ಇಲ್ಲವಾಗಿದೆ.
3 ವರ್ಷಗಳ ಹಿಂದೆ ಉದ್ಯೋಗ ಖಾತರಿಯಡಿ, ಸ್ಮಶಾನದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ₹3 ಲಕ್ಷ ಮೀಸಲಿಡಲಾಗಿತ್ತು. ಈ ಪೈಕಿ ಸುಮಾರು ₹56 ಸಾವಿರ ವಿನಿಯೋಗಿಸಿ, ತುಂಬೆಹಳ್ಳ ಭಾಗದ ಸ್ಮಶಾನವನ್ನು ಸ್ವಚ್ಛಗೊಳಿಸಲಾಗಿತ್ತು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸುತ್ತಾರೆ.
ಆದರೆ ರುದ್ರಭೂಮಿಗಾಗಿಯೇ ಮೀಸಲಿಟ್ಟ ಹಣವನ್ನು ಪೂರ್ಣ ಪ್ರಮಾಣವಾಗಿ ಏಕೆ ಬಳಸಲಿಲ್ಲ? ಇತರ ಕಡೆ ಇರುವ ರುದ್ರಭೂಮಿಯನ್ನು ಸ್ವಚ್ಛ ಮಾಡಿ, ಶವ ಸಂಸ್ಕಾರಕ್ಕೆ ಯೋಗ್ಯ ಪ್ರದೇಶವಾಗಿ ಏಕೆ ರೂಪಿಸಲಿಲ್ಲ? ಉಳಿದ ಹಣ ಯಾವುದಕ್ಕೆ ಖರ್ಚು ಮಾಡಲಾಯಿತು? ಎಂಬ ಬಗ್ಗೆ ನಿಖರ ಮಾಹಿತಿ ನೀಡಲಿಲ್ಲ.
ಸರ್ಕಾರದ ಕಡತಗಳಲ್ಲಿ ಹಿಂದೂ ರುದ್ರಭೂಮಿ ಎಂಬ ದಾಖಲೆ ಇಲ್ಲದೇ ಪುರಾತನ ಕಾಲದಿಂದಲೂ ಶವ ಸಂಸ್ಕಾರದ ತಾಣಗಳಾಗಿರುವ ಪಟ್ಟಣದ ಸ್ಮಶಾನದ ಭೂಮಿ ಒತ್ತುವರಿದಾರರ, ಅನುಪಯುಕ್ತ ಮುಳ್ಳು-ಕಲ್ಲುಗಳಿಂದಾಗಿ ಕ್ಷೀಣಿಸುತ್ತಿದೆ.
ಒಂದರ ಮೇಲೊಂದು ಶವಗಳ ಸಂಸ್ಕಾರ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಬದುಕಿದ್ದ ನಮಗೆ ಮನೆ ಹೇಗೆ ಅಗತ್ಯವೋ ಹಾಗೆ ಸತ್ತವರಿಗೆ ಸದ್ಗತಿ ತೋರಲು, ಶವ ಹೂಳಲು ಸ್ಮಶಾನಗಳೂ ಅವಶ್ಯ. ಸ್ಮಶಾನವೂ ಅಭಿವೃದ್ಧಿಗೆ ಅರ್ಹವಾಗಿದ್ದು, ಅಧಿಕಾ ರಿಗಳು, ಜನಪ್ರತಿನಿಧಿಗಳು ಪಟ್ಟಣದ ಸ್ಮಶಾನದ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.
-ಜೆ.ಒ.ಉಮೇಶ್ ಕುಮಾರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.