ADVERTISEMENT

ಸರ್ಕಾರದ ತುಘಲಕ್‌ ದರ್ಬಾರ್‌

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:39 IST
Last Updated 23 ಮೇ 2017, 5:39 IST

ಚಿಕ್ಕಮಗಳೂರು: ಜೀವಮಾಪಕ (ಬಯೋಮೆಟ್ರಿಕ್‌) ವ್ಯವಸ್ಥೆಯಡಿ ಪಡಿತರ ವಿತರಣೆಗೆ ಆದೇಶ ಹೊರಡಿ ಸಿರುವುದು ನ್ಯಾಯಬೆಲೆ ಅಂಗಡಿ ಯವರು, ಪಡಿತರ ಚೀಟಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆಹಾರ ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ತುಘಲಕ್‌ ದರ್ಬಾರ್‌ ನಡೆಸುತ್ತಿದೆ ಎಂದು ಶಾಸಕ ಸಿ.ಟಿ.ರವಿ ಇಲ್ಲಿ ಸೋಮವಾರ ಆರೋಪಿಸಿದರು. 

ಪಡಿತರ ವಿತರಿಸುವುದರಿಂದ ಉದ್ದೆ ಬೋರನಹಳ್ಳಿಯಲ್ಲಿ ಪಡಿತರ ಚೀಟಿದಾರರು ಪ್ರತಿಭಟನೆ ನಡೆಸಿದ್ದಾರೆ. ಪಡಿತರ ಸಿಗದೆ ಬಡವರು ಬೀದಿಗಿಳಿದು ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜೀವಮಾಪಕ ವ್ಯವಸ್ಥೆಗೆ ಕಂಪ್ಯೂಟ ರ್‌ಗಳನ್ನು ನ್ಯಾಯಬೆಲೆ ಅಂಗಡಿಯವರೇ ಖರೀದಿಸಬೇಕು ಎಂದು ಇಲಾಖೆಯು ಸುತ್ತೋಲೆ ಹೊರಡಿಸಿದೆ. ತಾವು ಕಂಪ್ಯೂಟರ್‌ ಖರೀದಿಸಲು ಸಾಧ್ಯ ಇಲ್ಲ ಎಂದು ನ್ಯಾಯಬೆಲೆ ಅಂಗಡಿಯವರು ಅಸಹಕಾರ ತೋರುತ್ತಿದ್ದಾರೆ.

ADVERTISEMENT

ಪಡಿತರ ವಿತರಣೆಗೆ ಹಿಂದೆ ಜಾರಿಗೊಳಿಸಿದ್ದ ‘ಪಾಯಿಂಟ್‌ ಆಫ್‌ ಸ್ಕೇಲ್‌’, ‘ಕೂಪನ್‌’ ವ್ಯವಸ್ಥೆ ಯಶಸ್ವಿಯಾಗಲಿಲ್ಲ. ಪೂರ್ವ ಸಿದ್ಧತೆ ಇಲ್ಲದೆ ಮತ್ತೆ ಹೊಸ ಆದೇಶ ಹೊರಡಿಸಿರುವುದರಿಂದ ಬಡವರು ಪಡಿಪಾಟಲುಪಡುವಂತಾಗಿದೆ ಎಂದರು.

ಪಡಿತರ ವಿತರಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡಿಲ್ಲ. ಪ್ರಾಯೋಗಿಕ ಸಮಸ್ಯೆಗಳನ್ನು ಇಲಾಖೆಯು ಗಣನೆಗೆ ತೆಗೆದುಕೊಂಡಿಲ್ಲ. ಹಳ್ಳಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಹಳಷ್ಟಿದೆ. ಸಮಸ್ಯೆ ಪರಿಹರಿಸಿ ಪಡಿತರ ಸಮರ್ಪಕ ವಿತರಣೆಗೆ ಕ್ರಮ ಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ 6 ತಿಂಗಳು ಕಳೆದರೂ, ಈವರೆಗೆ ಅರ್ಜಿದಾರರಿಗೆ ಹೊಸ ಕಾರ್ಡ್‌ ಸಿಕ್ಕಿಲ್ಲ. ಕಂದಾಯ ಮತ್ತು ಆಹಾರ ಇಲಾಖೆ ನಡುವೆ ಸಮನ್ವಯದ ಕೊರತೆ ಇದಕ್ಕೆ ಕಾರಣ.

ಕಾಲಮಿತಿಯೊಳಗೆ ಅರ್ಜಿಗಳನ್ನು ಪರಿಶೀಲಿಸಿ ಅರ್ಜಿದಾರರ ಆದಾಯವನ್ನು ಗ್ರಾಮಲೆಕ್ಕಿಗರು ಪ್ರಮಾಣೀಕರಿಸಿ ಅಪಲೋಡ್‌ ಮಾಡಲು ಕ್ರಮ ವಹಿಸಬೇಕು ಎಂದರು. ನಗರಸಭೆ ಸದಸ್ಯರಾದ ದೇವರಾಜ ಶೆಟ್ಟಿ, ಟಿ.ರಾಜಶೇಖರ್‌, ಬಿಜೆಪಿ ಮುಖಂಡ ಮಧುರಾಜ ಅರಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.