ಮೂಡಿಗೆರೆ: ‘ಕೌಶಲ ತರಬೇತಿ ಆಕಾಂಕ್ಷಿತ ಯುವಜನರ ಬೇಡಿಕೆ ಸಮೀಕ್ಷೆ ಹಾಗೂ ನೋಂದಣಿ ಕಾರ್ಯ ಕ್ರಮವನ್ನು ಇದೇ 15 ರಂದು ತಾಲ್ಲೂಕಿನಲ್ಲಿ ನಡೆಸಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಸಂಗಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ‘ರಾಜ್ಯಮಟ್ಟದ ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ಬೇಡಿಕೆ ಸಮೀಕ್ಷೆ ಹಾಗೂ ನೋಂದಣಿ ಕಾರ್ಯಕ್ರಮವನ್ನು ಮುಖ್ಯ ಮಂತ್ರಿ 15 ರಂದು ಉದ್ಘಾಟಿಸಲಿದ್ದು, ತಾಲ್ಲೂಕಿನ ಸಾರ್ವಜನಿಕರಿಗೆ ಆ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ವಾಗುವಂತೆ ಪಟ್ಟಣದ ಸೇಂಟ್ ಮಾರ್ಥಾಸ್ ಪ್ರೌಢಶಾಲಾ ಸಭಾಂಗ ಣದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು.
ಕಾರ್ಯಕ್ರಮ ಮುಗಿದ ನಂತರ 18 ರಿಂದ 35 ವರ್ಷದೊಳಗಿನ ಯುವ ಜನತೆಗೆ ತಮಗೆ ಬೇಕಾದ ಕೌಶಲವನ್ನು ಪಡೆಯಲು ಹೆಸರು ನೋಂದಾಯಿಸಲು ಅವಕಾಶವಾಗುವಂತೆ ಕ್ರಮ ಕೈಗೊಳ್ಳ ಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಬಳಿಕ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಅವರು, ‘ಕೌಶಲ ತರಬೇತಿ ಆಕಾಂಕ್ಷಿತ ಯುವಜನರ ಬೇಡಿಕೆ ಸಮೀಕ್ಷೆ ಹಾಗೂ ನೋಂದಣಿ ಕಾರ್ಯಕ್ರಮ’ ಉದ್ಯೋಗ ಆಕಾಂಕ್ಷಿ ಯುವ ಜನತೆಗಾಗಿ ರೂಪಿಸಿರುವ ಕಾರ್ಯಕ್ರಮವಾಗಿದ್ದು, ತಾಲ್ಲೂಕಿನಲ್ಲಿರುವ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರು ತಮಗೆ ಬೇಕಾದ ಕೌಶಲಗಳಲ್ಲಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಬಳಿಕ ತರಬೇತಿ ನೀಡಲಾಗುವುದು. ಇದೇ 15 ರಿಂದ 7 ದಿನಗಳವರೆಗೆ ನೋಂದಣಿ ಮಾಡಲಾಗುವುದು. ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕಳಸ ನಾಡ ಕಚೇರಿಯಲ್ಲಿ ನೋಂದಣಿ ಕಚೇರಿ ತೆರೆಯಲಾಗುವುದು. ಅರ್ಜಿ ಸಲ್ಲಿಸುವ ಯುವ ಜನರು ಆಧಾರ್ಕಾರ್ಡ್ ಸಂಖ್ಯೆ, ಭಾವಚಿತ್ರ ಸಹಿತ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಮಾಹಿತಿಯನ್ನು ನೋಂದಣಿ ಕೇಂದ್ರಕ್ಕೆ ತರಬೇಕಾಗುತ್ತದೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಸಿ.ಪಿ. ನಂದಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಪೂಂಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.