ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿಗೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನ.7ರಿಂದ 10ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿರುವ ಕಾರಣ ಮೂರುದಿನಗಳಿಂದಲೂ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ಬುಧವಾರ ಭದ್ರತೆಯಲ್ಲಿ ತುಸು ಸಡಿಲಗೊಂಡಂತೆ ಕಂಡಿತು. ಗುರುವಾರ ನಗರದಾದ್ಯಂತ ಖಾಕಿ ಪಡೆ ಕಾಣಿಸಿಕೊಂಡಿತು. ಬೆಳಿಗ್ಗೆ 9.30 ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ಶಸ್ತ್ರಾಸ್ತ್ರಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಪೊಲೀಸ್ ಕವಾಯತು ಮೈದಾನದಿಂದ ಆರಂಭಿಸಿದ ಪಥಸಂಚಲನ ಬಾರ್ಲೈನ್ ಮಾರ್ಗವಾಗಿ, ಪ್ರಜ್ವಲ್ ಹೋಟೆಲ್ ಮುಂದೆ ಸಾಗಿ, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರ, ಎಸ್ಬಿಐ ವೃತ್ತ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆಯಲ್ಲಿ ಸಾಗಿತು.
ಪುನಃ ಸಂಜೆ 4 ಗಂಟೆಗೆ ಭದ್ರತೆಗಾಗಿ ನಿಯೋಜಿಸಿದ್ದ ಎಲ್ಲ ಸಿಬ್ಬಂದಿ ನಗರದಾದ್ಯಂತ ಪುನಃ ಪಥ ಸಂಚಲನ ನಡೆಸಿದರು. ಇದರಲ್ಲಿ ವಜ್ರ, ತ್ರಿನೇತ್ರ, ಹೆದ್ದಾರಿ ಗಸ್ತು ವಾಹನಗಳು ಸೇರಿದಂತೆ, ಭದ್ರತೆಗೆ ನಿಯೋಜನೆಗೊಂಡಿರುವ ಎಲ್ಲರೂ ಪಾಲ್ಗೊಂಡಿದ್ದರು.
ಭದ್ರತೆಗಾಗಿ 2,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕ್ಷಿಪ್ರ ಕಾರ್ಯ ಪಡೆ, ರಾಜ್ಯ ಸಶಸ್ತ್ರ ಮೀಸಲುಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಿಷೇಧಾಜ್ಞೆ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿದ್ದಾಗ ಜಿಲ್ಲಾ ನ್ಯಾಯಾಲಯದ ಸುತ್ತಲೂ ಪೊಲೀಸರಿದ್ದರು. ತರಾಸು ರಂಗಮಂದಿರದಲ್ಲಿ ಜಿಲ್ಲಾ ಪ್ರೌಢಶಾಲೆಗಳ ಕನ್ನಡ ವಿಷಯ ಶಿಕ್ಷಕಕರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದ ಮೇಲೂ ಪೊಲೀಸರ ಕಣ್ಗಾವಲಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.