ADVERTISEMENT

ಕ್ರೀಡಾಕೂಟದಲ್ಲಿ ಪೋಷಕರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:06 IST
Last Updated 8 ಫೆಬ್ರುವರಿ 2017, 6:06 IST

ಹೊಳಲ್ಕೆರೆ: ‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೋಷಕರ ಸಹಭಾಗಿತ್ವ ಅಗತ್ಯ’ ಎಂದು ಬಿಇಒ ಡಿ.ಎ.ತಿಮ್ಮಣ್ಣ ಹೇಳಿದರು. ಪಟ್ಟಣದ ಎನ್‌ಇಎಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಪೋಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತವೆ. ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೋಷಕರ ಕ್ರೀಡಾ
ಕೂಟ ಏರ್ಪಡಿಸಿ ಬಹುಮಾನ ನೀಡುತ್ತಾರೆ. ಸರ್ಕಾರಿ ಶಾಲೆಗಳಲ್ಲೂ ಶಿಕ್ಷಕರು ಶಾಲಾ ಚಟುವಟಿಕೆಗಳಲ್ಲಿ ಪೋಷಕರನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಯ ಶೈಕ್ಷಣಿಕ ಗುಣಮಟ್ಟ, ಮನೆಯಲ್ಲಿ ಮಗುವಿನ ವರ್ತನೆಯ ಬಗ್ಗೆ ಆಗಾಗ ಚರ್ಚೆ ನಡೆಸಬೇಕು. ಶಾಲೆಗಳಲ್ಲಿ ಪ್ರತೀ ತಿಂಗಳು ಪೋಷಕರ ಸಭೆ ನಡೆಸಬೇಕು’ ಎಂದರು.

ಶ್ರೀಮಂತರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಸೇರಿಸುತ್ತಾರೆ. ಸಾಮಾನ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಸರ್ಕಾರಿ ಶಾಲೆಗೆ ಸೇರುತ್ತಾರೆ. ಇವರಲ್ಲಿಯೂ ಅಗಾಧ ಪ್ರತಿಭೆ ಇದ್ದು, ಶಿಕ್ಷಕರು ಉತ್ತೇಜನ ನೀಡಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕ ಜನ ಉನ್ನತ ಹುದ್ದೆಯಲ್ಲಿ ಇದ್ದಾರೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

ಪೋಷಕರಿಗೆ ಬಲೂನು ಒಡೆಯುವ ಆಟ, ಮ್ಯೂಸಿಕಲ್‌ ಚೇರ್‌, ಮೇಣದ ಬತ್ತಿ ಹಚ್ಚುವುದು, ಚಮಚ–ನಿಂಬೆಹಣ್ಣಿನ ಓಟ ಮತ್ತಿತರ ಸ್ಪರ್ಧೆಗಳನ್ನು ನಡೆಸಲಾಯಿತು.

ಇಸಿಒ ಬಸಪ್ಪ, ಸಿಆರ್‌ಪಿ ಬನಿಹಾಷಂ, ಎಸ್‌ಡಿಎಂಸಿ ಉಪಾಧ್ಯಕ್ಷ ಓಂಕಾರಪ್ಪ, ಮುಖ್ಯಶಿಕ್ಷಕ ಎಂ.ಉಚ್ಚಂಗಪ್ಪ, ರಾಧಮ್ಮ, ಜ್ಯೋತಿ, ರೂಪಾ ಉಪಸ್ಥಿತರಿದ್ದರು.

*
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಸಂಭ್ರಮದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪೋಷಕರ ಕ್ರೀಡಾಕೂಟ ಏರ್ಪಡಿಸಿದ್ದೇವೆ.
-ಎಂ.ಉಚ್ಚಂಗಪ್ಪ,
ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT