ಚಳ್ಳಕೆರೆ: ಜೆಡಿಎಸ್ ಪ್ರಣಾಳಿಕೆ ಬಗ್ಗೆ ಮಾಹಿತಿ ಬಿತ್ತರಿಸಲು ಎಲ್ಇಡಿ ಪರದೆಯುಳ್ಳ ವಾಹನವನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ವಿಧಾನ ಸಭೆ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎಂ. ರವೀಶ್ ಕುಮಾರ್ ತಿಳಿಸಿದರು.
ನಗರದ ಚಿತ್ರದುರ್ಗ ರಸ್ತೆ ಜೆಡಿಎಸ್ ಕಚೇರಿ ಆವರಣದಲ್ಲಿ ಮಂಗಳವಾರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ರಾಜ್ಯದಾದ್ಯಂತ ಜೆಡಿಎಸ್ ಪ್ರಣಾಳಿಕೆಯನ್ನು ಮತದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಇಡಿ ಪರದೆ ಇರುವ ವಾಹನ ಸಂಚರಿಸುತ್ತಿದೆ. ಚುನಾವಣಾ ಆಯೋಗದ ಅನುಮತಿ ಪಡೆದು ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕಿನ ಎಲ್ಲಾ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಲು ಯೋಜನೆ ರೂಪಿಸಲಾಗಿದೆ. ಪ್ರತಿ ಗ್ರಾಮಗಳ ಎಲ್ಲಾ ಬೂತ್ಗಳಿಗೆ ತೆರಳಿ ಎಇಡಿಯಲ್ಲಿ ಪ್ರಣಾಳಿಕೆ ಅಂಶಗಳನ್ನು ಜನರಿಗೆ ತಿಳಿಸಲಾಗುತ್ತದೆ. ರೈತರಿಗೆ, ಕಾರ್ಮಿಕರಿಗೆ ಮತ್ತು ಎಲ್ಲಾ ಇಲಾಖೆಗಳಲ್ಲಿರುವ ಅರೆಕಾಲಿಕ ನೌಕರರ ಕಾಯಂ ಸೇರಿದಂತೆ ಹಲವು ಅನುಕೂಲ ಕಲ್ಪಿಸುವ ಕುರಿತು ಪ್ರಚಾರ ನಡೆಸಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಸಮರ್ಥರಾಯ, ನಗರಸಭೆ ಉಪಾಧ್ಯಕ್ಷ ಟಿ. ವಿಜಯ್ಕುಮಾರ್, ಸದಸ್ಯ ವಿ.ವೈ. ಪ್ರಮೋದ್, ಜೆಡಿಎಸ್ ಮುಖಂಡರಾದ ಎಚ್. ಆನಂದಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆಜಿಎನ್ ಮುಜೀಬುಲ್ಲಾ, ಭೀಮನಕೆರೆ ಭೀಮಣ್ಣ, ಸಾಹಿತಿ ಟಿ.ಜೆ. ತಿಪ್ಪೇಸ್ವಾಮಿ, ಶಿರಿಗೆ ಪ್ರಭು, ರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.