ಹಿರಿಯೂರು: ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಬೀದರ್–ಶ್ರೀರಂಗಪಟ್ಟಣ ರಸ್ತೆ ವಿಸ್ತರಣೆ ಮಾಡಬೇಕ ಎಂಬ ನಾಗರಿಕರ ಹಲವು ದಶಕಗಳ ಕಾಲದ ಬೇಡಿಕೆಗೆ ಮರು ಜೀವ ಬಂದಿದೆ. ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಈಚೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರವಾಸಿ ಮಂದಿರ ವೃತ್ತದಿಂದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜುವರೆಗಿನ ರಸ್ತೆಯನ್ನು ವಿಸ್ತರಿಸುವಂತೆ ಹತ್ತಾರು ಪ್ರಗತಿಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತ ಬಂದಿವೆ. ಹಿಂದೆ ಇದ್ದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹಲವು ಬಾರಿ ಹೋರಾಟಗಾರರ, ಕಟ್ಟಡ ಮಾಲೀಕರ ಸಭೆ ನಡೆಸಿದ್ದರು. ಇನ್ನೇನು ರಸ್ತೆ ವಿಸ್ತರಣೆ ಮುಹೂರ್ತ ಕೂಡಿಯೇ ಬಂತು ಎನ್ನುವಷ್ಟರಲ್ಲಿ ಅವರು ವರ್ಗಾವಣೆಯಾದರು. ಹೀಗಾಗಿ ನಾಗರಿಕರಲ್ಲಿ ಮತ್ತೆ ಬೇಸರ ಮನೆ ಮಾಡಿತ್ತು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಈಚೆಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಖುದ್ದು ರಸ್ತೆಯನ್ನು ವೀಕ್ಷಿಸಿದರು. ಈ ರಸ್ತೆಯನ್ನು ತುರ್ತಾಗಿ ವಿಸ್ತರಣೆ ಮಾಡಬೇಕಾಗಿದೆ. ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ. ಕಾನೂನು ತೊಡಕು ನಿವಾರಿಸಿ ಆದಷ್ಟು ಬೇಗ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ತಹಶೀಲ್ದಾರ್ ವೆಂಕಟೇಶಯ್ಯ, ಪೌರಾಯುಕ್ತ ರಮೇಶ್ ಸುಣಗಾರ್, ಕಂದಾಯ ನಿರೀಕ್ಷಕ ಶಿವಬಸಪ್ಪ, ಎಂಜಿನಿಯರ್ ಮೂಡ್ಲಗಿರಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ಟಿ.ಚಂದ್ರಶೇಖರ್, ಸ್ಥಾಯಿಸಮಿತಿ ಅಧ್ಯಕ್ಷ ದಾದಾಪೀರ್, ಸದಸ್ಯ ಪ್ರೇಮ್ಕುಮಾರ್, ಪಿಎಸ್ಐ ವೆಂಕಟೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.