ADVERTISEMENT

ಲಕ್ಷ್ಮೀರಂಗನಾಥಸ್ವಾಮಿಯ ಅನ್ನದಕೋಟೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 8:47 IST
Last Updated 21 ಸೆಪ್ಟೆಂಬರ್ 2017, 8:47 IST

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಾಡದಕೆರೆ ಹೋಬಳಿ ದುಗ್ಗಾವರ ಗ್ರಾಮದ ಕೋಟೆಕಲ್ಲು ಲಕ್ಷ್ಮೀರಂಗನಾಥಸ್ವಾಮಿಯ ಅನ್ನದ ಕೋಟೆ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಭ್ರಮದಿಂದ ನಡೆಯಿತು.

ಅನ್ನದಕೋಟೆ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗಂಗಾಪೂಜೆ, ಗಣಪತಿ ವಾಸ್ತು ಹಾಗೂ ನವಗ್ರಹ ಪೂಜೆ, ಅಭಿಷೇಕ, ಅಲಂಕಾರ ಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ, ಧೂಪಸೇವೆ ಮೊದಲಾದ ಧಾರ್ಮಿಕ ಆಚರಣೆಗಳು ನೆರವೇರಿದವು.

ಈ ಕ್ಷೇತ್ರದಲ್ಲಿ ಪ್ರತಿವರ್ಷ ಮಹಾಲಯ ಅಮಾವಾಸ್ಯೆಯಂದು ಕೋಟೆಕಲ್ಲು ಲಕ್ಷ್ಮೀರಂಗನಾಥಸ್ವಾಮಿಗೆ ಅನ್ನಶಾಂತಿ ಮಾಡುವಂತಹ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯುತ್ತದೆ. ದುಗ್ಗಾವರ ಸುತ್ತಮುತ್ತಲಿನ ದೊಡ್ಡಘಟ್ಟ, ಗೂಳಿಹಟ್ಟಿ, ಡಿ.ಮಲ್ಲಾಪುರ, ಬನ್ಸಿಹಳ್ಳಿ, ಕಂಠಾಪುರ, ಮನಸಿಂಗನಹಳ್ಳಿ, ಎನ್‌.ವಿ.ಹಟ್ಟಿ, ತಣೀಗೆಕಲ್ಲು, ಎಸ್‌.ರೊಪ್ಪ, ಎಚ್‌.ರೊಪ್ಪ ಒಳಗೊಂಡಂತೆ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಪ್ರತಿವರ್ಷದಂತೆ ಈ ಬಾರಿಯೂ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಅನ್ನದಕೋಟೆ ವಿಶೇಷ: ಭಕ್ತರು ತಮ್ಮ ಶಕ್ತ್ಯಾನುಸಾರ ಅಕ್ಕಿಯನ್ನು ದೇವರಿಗೆ ಮೀಸಲು ಹಾಕುತ್ತಾರೆ. ಆ ಅಕ್ಕಿಯಲ್ಲಿ ಸುಮಾರು 10 ಕ್ವಿಂಟಲ್‌ ಅಕ್ಕಿಯ ಅನ್ನವನ್ನು ದೇವಸ್ಥಾನದಲ್ಲಿ ದೇವರು ನೇಮಿಸಿದ ವ್ಯಕ್ತಿಗಳು ತಯಾರಿಸುತ್ತಾರೆ. ನಂತರ ಅಷ್ಟೂ ಅನ್ನ ಬಳಸಿ ಪುರೋಹಿತರ ನೇತೃತ್ವದಲ್ಲಿ ಅನ್ನದಕೋಟೆ ಕಟ್ಟಲಾಯಿತು.

ಅದಕ್ಕೆ ಬೆಲ್ಲ, ಹಾಲು, ಮೊಸರು, ತುಪ್ಪ, ಬಾಳೆಹಣ್ಣು, ಎಳ್ಳು, ಚಿಗಳಿ, ತಂಬಿಟ್ಟು, ಕಲ್ಲು ಸಕ್ಕರೆ, ಉತ್ತತ್ತಿ ಹಾಗೂ ಶೇಂಗಾ ಪುಡಿ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅಲಂಕೃತ ದೇವರ ಮೂರ್ತಿಯನ್ನು ಅನ್ನದ ಕೋಟೆ ಸುತ್ತ ಮೂರು ಸುತ್ತು ಸುತ್ತಿಸಲಾಗುತ್ತದೆ. ವಿಶೇಷ ಪೂಜೆಯ ನಂತರ ಅನ್ನಸಂತರ್ಪಣೆ ಮಾಡಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯೆ ವಿಜಯಲಕ್ಷ್ಮಿ ಪ್ರಕಾಶ್‌, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶಶಿಕಲಾ ಕೃಷ್ಣಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಪರಮೇಶ್ವರಪ್ಪ, ಸುವರ್ಣಮ್ಮ, ಪಿಎಸಿಎಸ್‌ ಅಧ್ಯಕ್ಷೆ ಎಚ್‌.ಕೆ.ನಾಗರತ್ನಮ್ಮ, ದೇವಸ್ಥಾನ ಸಮಿತಿ ಸಂಚಾಲಕ ಆರ್‌.ಕುಮಾರ್‌, ಗೌಡರಾದ ಕೆ.ಪಿ.ಮಂಜು, ಎಚ್‌.ಎಸ್‌.ರಂಗಸ್ವಾಮಿ, ಬಿ.ಎ.ಪ್ರಸನ್ನಕುಮಾರ್‌, ಗೋವಿಂದಪ್ಪ, ಪರಮೇಶ್ವರಪ್ಪ, ಮಂಜುನಾಥ್‌, ಕುಮಾರ್‌, ಸದಾಶಿವಪ್ಪ ಹಾಗೂ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.