ಮಂಗಳೂರು: ‘ರಾಜ್ಯದ ಎರಡು ಕ್ಷೇತ್ರ ಗಳಿಗೆ ನಡೆಯುತ್ತಿರುವ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಮೋದಿ ಮೋಡಿ ಬೇಕಾಗಿಲ್ಲ, ಸಿದ್ದರಾ ಮಣ್ಣನೇ ಸಾಕು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯರಾದ ಎಸ್.ಎಂ. ಕೃಷ್ಣ ಮತ್ತು ಶ್ರೀನಿವಾಸ ಪ್ರಸಾದ ಅವರು ಪಕ್ಷದಿಂದ ಹೊರನಡೆಯಲು ಸಿದ್ದರಾಮಯ್ಯ ಅವರ ದುರಹಂಕಾರವೇ ಕಾರಣ. ಇದೇ ಕಾರಣ ದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಈಗಾಗಲೇ 3 ವರ್ಷಕ್ಕೂ ಹೆಚ್ಚು ಅಧಿಕಾರ ನಡೆಸಿದ್ದಾರೆ. ಕಾಂಗ್ರೆಸ್ ಉಳಿಸಲು ಇನ್ನಾದರೂ, ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯ ಮಂತ್ರಿ ಮಾಡಬೇಕು. ಮುಖ್ಯಮಂತ್ರಿ ಬದಲಾವಣೆ ಮಾಡಿದಲ್ಲಿ, ಉಪಚುನಾ ವಣೆಯ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದ ಕಗ್ಗೊಲೆ: ಆಕಾಶದಲ್ಲಿ ತೇಲುತ್ತಿರುವ ಬಿಜೆಪಿ ನಾಯಕರು, ಪ್ರಜಾ ಪ್ರಭುತ್ವದ ಕೊಲೆ ಮಾಡಲು ಹೊರಟಿ ದ್ದಾರೆ. ಗೋವಾ ಮತ್ತು ಮಣಿಪುರದಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು. ಇಂತಹ ಸಂಪ್ರದಾಯವನ್ನು ಮುರಿಯುತ್ತಿರುವುದು ಕಳವಳಕಾರಿ ಎಂದು ಜನಾರ್ದನ ಪೂಜಾರಿ ಹೇಳಿದರು.
ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಇದನ್ನೇ ಮಾಡಿಕೊಂಡು ಬರುತ್ತಿವೆ. ಜನರಿಗೂ ಇಂತಹ ರಾಜಕೀಯ ನೋಡಿ ಸಾಕಾಗಿದೆ. ಮೋದಿ ಅವರಾದರೂ, ಒಳ್ಳೆಯ ರಾಜಕೀಯ ಮಾಡಬಹುದು ಎನ್ನುವ ನಂಬಿಕೆ ಇತ್ತು. ಆದರೆ, ಇದೀಗ ಅದು ಹುಸಿಯಾಗಿದೆ ಎಂದು ಹೇಳಿದರು.
ಗೋವಾದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ. ಅತಿ ದೊಡ್ಡ ಪಕ್ಷವಾಗಿದ್ದರಿಂದ ಕೂಡಲೇ ಈ ಕುರಿತು ರಾಜ್ಯಪಾಲರಿಗೆ ಪತ್ರ ನೀಡಬೇಕಾಗಿದೆ ಎಂದು ತಿಳಿಸಿದರು.
**
ನರೇಂದ್ರ ಮೋದಿಗಿಂತ ರಾಹುಲ್ ಗಾಂಧಿ ಉತ್ತಮ ಆಡಳಿತಗಾರ. ಅವರಿಗೆ ಅವಕಾಶ ಸಿಕ್ಕರೆ, ಇದನ್ನು ಖಂಡಿತವಾಗಿಯೂ ನಿರೂಪಿಸುತ್ತಾರೆ.
–ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.