ADVERTISEMENT

‘ಕ್ರೀಡೆಗೆ ಆರ್ಥಿಕ ತೊಂದರೆ ಬಾರದಿರಲಿ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:46 IST
Last Updated 17 ಏಪ್ರಿಲ್ 2017, 8:46 IST

ಮಂಗಳೂರು: ಸ್ಪೆಷಲ್‌ ಒಲಿಂಪಿಕ್‌ ಭಾರತ್‌ನ ಕರ್ನಾಟಕ ರಾಜ್ಯ ಸಮಿತಿ ನೂತನ ಅಧ್ಯಕ್ಷರಾಗಿ ಆಹಾರ ಸಚಿವ ಯು.ಟಿ. ಖಾದರ್‌ ಅಧಿಕಾರ ವಹಿಸಿಕೊಂಡರು. ನಂತರ ನಗರದ ಸರ್ಕಿಟ್‌ ಹೌಸ್‌ನಲ್ಲಿ ಶನಿವಾರ ಸ್ಪೆಷಲ್‌ ಒಲಿಂಪಿಕ್‌ ರಾಜ್ಯ ಸಮಿತಿಯ ಪ್ರಥಮ ಸಭೆ ನಡೆಸಿದ ಅವರು, ‘ಬುದ್ಧಿ ಮಾಂದ್ಯ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ರಾಜ್ಯದಲ್ಲಿ ಎಲ್ಲ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ರಾಜ್ಯ ಸಂಸ್ಥೆ ನಡೆಸಬೇಕು. ಇದಕ್ಕೆ ಬೇಕಾಗುವ ಖರ್ಚುಗಳ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿ, ಕ್ರೀಡಾ ಸಚಿವರು ಹಾಗೂ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.ಸಮಿತಿ ಸದಸ್ಯರ ಮನವಿಗೆ ಸ್ಪಂದಿಸಿದ ಖಾದರ್‌, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸಂಸ್ಥೆಯ ಕಚೇರಿಯನ್ನು ಆರಂಭಿಸಲು, ಕೊಠಡಿ ಪಡೆಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ರಾಜ್ಯ ಸಮಿತಿ ಉಪಾಧ್ಯಕ್ಷರಾದ ಮಹಾಬಲ ಮಾರ್ಲ, ಜಯವಿಠಲ್‌, ರಾಜ್ಯ ಕ್ರೀಡಾ ನಿರ್ದೇಶಕ ಅಮರೇಂದ್ರ ಅಂಜನಪ್ಪ, ಕೋಶಾಧಿಕಾರಿ ಜಗದೀಶ್‌ ಶೆಟ್ಟಿ, ತಾಂತ್ರಿಕ ನಿರ್ದೇಶಕ ಮಹೇಶ್‌ಕುಮಾರ್‌, ಅಂಗವಿಕಲ ಮಕ್ಕಳ ಪಾಲಕರ ವಿಭಾಗದ ಅಧ್ಯಕ್ಷ ಮಹಮ್ಮದ್‌ ಬಶೀರ್‌, ಜಿಲ್ಲಾ ಘಟಕದ ಅಧ್ಯಕ್ಷ ಮಾಧವ ಸುವರ್ಣ,ಉಡುಪಿ–ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮೇಲ್ವಿಚಾರಕಿ ಆಗ್ನೇಸ್‌ಕುಂದರ್‌, ಮೀರಾ ಸತೀಶ್‌ ಉಪಸ್ಥಿತರಿದ್ದರುಸ್ಪೆಷಲ್‌ ಒಲಿಂಪಿಕ್‌ ರಾಜ್ಯ ವಲಯ ನಿರ್ದೇಶಕ ವಸಂತಕುಮಾರ್‌ ಶೆಟ್ಟಿ ಸ್ವಾಗತಿಸಿದರು. ರಾಷ್ಟ್ರೀಯ ಅಥ್ಲೆಟಿಕ್‌ ಕೋಚ್‌ ನಾರಾಯಣ ಶೆರ್ವೇಗಾರ ವರದಿ ಮಂಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.