ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಸೀಮೆ ದೇವಾಲಯವಾದ ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಂಗಳವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಲಕ್ಷಾಂತರ ಮಂದಿ ಭಕ್ತ ಸಾಗರದ ನಡುವೆ ಬ್ರಹ್ಮರಥೋತ್ಸವ ಮತ್ತು ‘ಪುತ್ತೂರು ಬೆಡಿ’ ಎಂದೇ ಖ್ಯಾತಿಯ ಸುಡುಮದ್ದು ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು.
ದೇವಾಲಯದ ಒಳಾಂಗಣದಲ್ಲಿ ಶ್ರೀ ದೇವರ ಉತ್ಸವ ಬಲಿ ನಡೆದ ಬಳಿಕ ಗೋಪುರದ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು. ಬಳಿಕ ದೇವಾ ಲಯದ ಎದುರಿನ ದೇವರ ಮಾರುಗದ್ದೆಯಲ್ಲಿ ಭವ್ಯವಾಗಿ ಅಲಂಕರಿಸಿ ನಿಲ್ಲಿಸಲಾಗಿದ್ದ ಬ್ರಹ್ಮರಥದ ಬಳಿಗೆ ಸಕಲ ಸೇವೆಗಳೊಂದಿಗೆ ದೇವರ ಆಗಮನವಾದ ಬಳಿಕ ರಾತ್ರಿ ದೇವರ ರಥಾರೂಢನ ನಡೆಯಿತು. ಹತ್ತೂರ ಒಡೆಯ ಮಹಾಲಿಂಗೇಶ್ವರ ನಿಗೆ `ಹರಹರ ಮಹಾದೇವಾ' ಜಯ ಘೋಷ ಮೊಳಗಿದ್ದು, ಭಕ್ತಸಾಗರದಲ್ಲಿ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ರಥಾರೂಢರಾದ ದೇವರಿಗೆ ಮಹಾಮಂಗಳಾರತಿ ಬೆಳಗಿದ ಕೂಡಲೇ ಬೆಡಿ ಪ್ರದರ್ಶನ ಆರಂಭಗೊಂಡಿತು.
ಬಾನಂಗಳದಲ್ಲಿ ಬಣ್ಣದ ಚಿತ್ತಾರ: ಪುತ್ತೂರು ಜಾತ್ರೆಯ ಸುಡುಮದ್ದು ಪ್ರದರ್ಶನ `ಪುತ್ತೂರು ಬೆಡಿ' ಎಂದೇ ಪ್ರಸಿದ್ಧಿ. ಪುತ್ತೂರು ಬೆಡಿ ಇಲ್ಲಿನ ಜಾತ್ರೆಯ ವಿಶೇಷ ಆಕರ್ಷಣೆಯೂ ಹೌದು. ಈ ವರ್ಷ ಜಿಎಸ್ಟಿ ಸೇರಿ ₹ 7ಲಕ್ಷ ವೆಚ್ಚದಲ್ಲಿ ಸುಡುಮದ್ದು ಪ್ರದರ್ಶನ ವ್ಯವಸ್ಥೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.