ADVERTISEMENT

ವಿವಾದ ಸೃಷ್ಟಿಸಿದ ಗರಡಿಮನೆ ಕಾಂಪೌಂಡ್‌

ಹಳ್ಳದಕೇರಿ: ಎರಡು ಬಣಗಳ ನಡುವೆ ವಾಗ್ವಾದ, ಘರ್ಷಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 3:52 IST
Last Updated 12 ಮೇ 2017, 3:52 IST
ಹರಿಹರ:  ಇಲ್ಲಿನ ಹಳ್ಳದಕೇರಿಯ ಮಾರುತಿ ಗರಡಿ ಮನೆ ಕಾಂಪೌಂಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ಗುರುವಾರ ವಾಗ್ವಾದ ಘರ್ಷಣೆಗೆ ತಿರುಗಿದೆ.
 
ಹಳ್ಳದಕೇರಿಯ ಹಳ್ಳಕ್ಕೆ ಸಂಪರ್ಕ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಗರಡಿಮನೆಯ ಕಾಂಪೌಂಡ್ ಕುಸಿದಿತ್ತು. ಕಾಂಪೌಂಡ್‌ ನಿರ್ಮಿಸಲು ಮುಂದಾದಾಗ ನೂತನ ವಾಲ್ಮೀಕಿ ಸಮುದಾಯ ಭವನ ಹಾಗೂ ಪರಿಶಿಷ್ಟ ಪಂಗಡದ ಕಾಲೊನಿಗೆ ಸಂಪರ್ಕ ರಸ್ತೆಗೆ ಸ್ಥಳಾವಕಾಶ ನೀಡಬೇಕು ಎಂದು ಒಂದು ಗುಂಪಿನವರು ಒತ್ತಾಯಿಸಿದರು. ಇನ್ನೊಂದು ಗುಂಪು ಯಥಾಸ್ಥಿತಿ ಕಾಪಾಡಬೇಕು ಎಂದು ಪಟ್ಟು ಹಿಡಿಯಿತು.
 
‘ಗರಡಿ ಮನೆಗೆ ಕಾಂಪೌಂಡ್‌ ಇಲ್ಲದಿರುವುದರಿಂದ ಈ ರಸ್ತೆಯಲ್ಲಿ ಹೆಣ್ಣುಮಕ್ಕಳು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಂದ ಬಂದ ದೂರು ಹಾಗೂ ಗರಡಿ ಮನೆಯಲ್ಲಿ ಶಿಸ್ತು ಕಾಪಾಡಲು ಕಾಂಪೌಂಡ್ ನಿರ್ಮಿಸಲು ತೀರ್ಮಾನ ಕೈಗೊಂಡಿದ್ದೇವೆ’ ಎಂದು ನಾಯಕ ಸಮಾಜದ ನಗರ ಘಟಕದ ಅಧ್ಯಕ್ಷ ಕಳ್ಳೇರ ಮಂಜಣ್ಣ ತಿಳಿಸಿದರು. 
 
‘ಸರ್ಕಾರಿ ಜಾಗದಲ್ಲಿ ಎಸ್‌ಟಿ ಕಾಲೊನಿ ಹಾಗೂ ವಾಲ್ಮೀಕಿ ಸಮುದಾಯ ಭವನಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು ಸಾರ್ವಜನಿಕರು ನಿರ್ಧರಿಸಿದ್ದರು. ಇದಕ್ಕಾಗಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಕಾಂಪೌಂಡ್‌ ನಿರ್ಮಿಸಲು ನಾಯಕ ಸಮಾಜ ಮುಂದಾಗಿತ್ತು.
 
ಇದಕ್ಕೆ ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ ಅವರೂ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಅವರ ಕುಟುಂಬದ ಸದಸ್ಯರು ಹಾಗೂ ಕೆಲವರು ಗುಂಡಿ ತೆಗೆಯುತ್ತಿದ್ದ ಕಾರ್ಮಿಕರನ್ನು ಬೆದರಿಸಿ, ಕಾಮಗಾರಿ ತಡೆದಿದ್ದಾರೆ’ ಎಂದು ದೂರಿದರು. 
 
ಗರಡಿಮನೆ ಸುರಕ್ಷತೆಗಾಗಿ 10 ಅಡಿ ಎತ್ತರದ 60 ಅಡಿ ಉದ್ದದ ಗೋಡೆಯನ್ನು ಶೇ 22.75 ಅನುದಾನ ಹಾಗೂ ನಾಯಕ ಸಮಾಜದವರ ದೇಣಿಗೆಯಿಂದ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದರ ಹಿಂದೆ ವೈಯಕ್ತಿಕ ಪ್ರತಿಷ್ಠೆಯಿಲ್ಲ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
 
ಹಂಚಿನಮನೆ ದೇವೇಂದ್ರಪ್ಪ, ದಿನೇಶ್‌ಬಾಬು, ರಾವುಗಪ್ಪ, ಮಕ್ರಿ ಪಾಲಾಕ್ಷಪ್ಪ, ಆಟೋರಾಜು, ಬಂದರ್ಕಿ ಬಸವರಾಜ್, ನಿಂಗೇಶ್, ಎಂ.ಎಚ್. ಪರಶುರಾಮ, ಬಸವರಾಜು, ಕುಮಾರ, ಮಾಳಗಿ ನಿಂಗಪ್ಪ, ಎಡೆಹಳ್ಳಿ ಲಕ್ಷ್ಮಣಪ್ಪ, ಹಂಚಿನಮನಿ ಕೃಷ್ಣ ಹಾಜರಿದ್ದರು. 
 
ಕಾಮಗಾರಿಗೆ ಆಕ್ಷೇಪ: ಗರಡಿಮನೆ ಕಾಂಪೌಂಡ್ ಕಾಮಗಾರಿ ತಡೆಯುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು. 
 
ಈ ಕುರಿತು ವಿಚಾರಣೆ ನಡೆಸಿದ ಪಿಎಸ್ಐ ಹನುಮಂತಪ್ಪ ಎಂ. ಶಿರೀಹಳ್ಳಿ, ನಗರಸಭೆಯಿಂದ ಪರವಾನಗಿ ಪಡೆದು ಕಾಮಗಾರಿ ನಡೆಸುವಂತೆ ಕಳ್ಳೇರ ಮಂಜಣ್ಣ ಅವರಿಗೆ ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.