ದಾವಣಗೆರೆ: ‘ಒಂದು ಕಡೆಯಿಂದ ಜಾತೀಯತೆಯ ಕಸವನ್ನು ನಾವು ಸ್ವಚ್ಛ ಮಾಡುತ್ತ ಹೋಗುತ್ತಿದ್ದೇವೆ. ಆದರೆ, ರಾಜಕಾರಣಿಗಳು ಮತ್ತೆ ಕಸವನ್ನು ಚೆಲ್ಲುತ್ತ ಜಾತಿಯ ಕಲುಷಿತ ಭಾವನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಪರಂಪರೆಯ ಜಾತ್ಯತೀತ ನೆಲೆಗಳು’ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಜಾತಿ ಇದ್ದರೂ ಸಾಮರಸ್ಯ ಇತ್ತು. ಜಾತಿಯನ್ನು ಹೋಗಲಾಡಿಸಲು ಯತ್ನಿಸಿದಷ್ಟೂ ಜಾತೀಯತೆ ಇಂದು ಹೆಚ್ಚು ಗಟ್ಟಿಗೊಳ್ಳುತ್ತಿದೆ. ರಾಜಕೀಯ ಕಾರಣದಿಂದಲೇ ಇದು ಹೆಚ್ಚು ಬೆಳೆಯುತ್ತಿದೆ. ಜಾತಿ ಸಮೀಕ್ಷೆ ನಡೆಸಲಾಯಿತು. ಆ ಸಮೀಕ್ಷೆ ಹತ್ತಾರು ಹೊಸ ಗುಂಪು ಹುಟ್ಟಿಕೊಳ್ಳಲು ಕಾರಣವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಚುನಾವಣೆ ಬಂದಾಗ ಸಮಾಜದಲ್ಲಿ ಸಾಮರಸ್ಯ ಕದಡುತ್ತಿದೆ. ರಾಜಕೀಯ ವ್ಯಕ್ತಿಗಳು ನಮ್ಮಲ್ಲಿರುವ ಸಾಮರಸ್ಯವನ್ನು ಕಡಿದು ಹಾಕಿ, ವಿಷದ ಬೀಜ ಬಿತ್ತುತ್ತಿದ್ದಾರೆ. ಹೀಗಾಗಿ ಸಾಮರಸ್ಯವನ್ನು ಮತ್ತೆ ಬೆಳೆಸುವ ಕಾರ್ಯ ನಡೆಯಬೇಕಿದೆ’ ಎಂದು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.