ADVERTISEMENT

‘ಆರೋಪ ಹೆಚ್ಚಿದಷ್ಟು ವಿನಯ ಬೆಳವಣಿಗೆ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 8:42 IST
Last Updated 25 ಡಿಸೆಂಬರ್ 2017, 8:42 IST
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಲಮ್ಮ ಗೌಡರ ಉದ್ಘಾಟಿಸಿದರು
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಲಮ್ಮ ಗೌಡರ ಉದ್ಘಾಟಿಸಿದರು   

ಧಾರವಾಡ: ‘ವಿರೋಧಿಗಳ ಆರೋಪ ಹಾಗೂ ಹೊಟ್ಟೆಕಿಚ್ಚು ಹೆಚ್ಚಿದಷ್ಟೂ ಸಚಿವ ವಿನಯ ಕುಲಕರ್ಣಿ ಇನ್ನಷ್ಟು ಶಕ್ತಿಯುತವಾಗಿ ಬೆಳೆಯುತ್ತಾರೆ. ಹೀಗಾಗಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ 50ಸಾವಿರ ಮತಗಳ ಅಂತರದಿಂದ ಅವರನ್ನು ಮತ್ತೊಮ್ಮೆ ಆರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ತಾಲ್ಲೂಕಿನ ಗರಗ ಗ್ರಾಮದಲ್ಲಿ ಭಾನುವಾರ ನಡೆದ ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಹಾಗೂ ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಕ್ರಿಯಾಶೀಲ ವ್ಯಕ್ತಿಯಾಗಿರುವ ವಿನಯ ಅವರ ಏಳಿಗೆಯನ್ನು ಬಿಜೆಪಿ ನಾಯಕರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸಬೇಕು. ರಾಜಕೀಯವಾಗಿ ತೇಜೋವಧೆ ಮಾಡಬೇಕು ಎಂದು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲಿಸದು’ ಎಂದರು.

ADVERTISEMENT

‘ನೇರ ತೆರಿಗೆ ವ್ಯವಸ್ಥೆ ಜಾರಿಯಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಗುಜರಾತ್ ನಮಗಿಂತ ಹಿಂದಿದೆ. ರಾಜ್ಯದ ಬಜೆಟ್‌ ಪ್ರತಿ ವರ್ಷ ಶೇ 10ರಿಂದ 15ರ ದರದಲ್ಲಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ. 2013ರಲ್ಲಿ ₹98 ಸಾವಿರ ಕೋಟಿ ಮೊತ್ತದ ಬಜೆಟ್‌ ಮಂಡಿಸಿದ್ದೆ. 2018ರಲ್ಲಿ ₹2.10ಲಕ್ಷ ಕೋಟಿ ಬಜೆಟ್‌ ಮಂಡಿಸಲಿದ್ದೇನೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ‘ಸುಳ್ಳು ಹೇಳುತ್ತಾ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಜೋಶಿ ಅವರನ್ನು ಮೂರು ಬಾರಿ ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೀರಿ. ಜೋಶಿ ಹಾಗೂ ಸೀಮಾ ಮಸೂತಿ ಅವರ ಅವಧಿಯಲ್ಲಿ ಎಷ್ಟು ಕೆಲಸಗಳಾಗಿವೆ ಹಾಗೂ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎಷ್ಟು ಕೆಲಸ ಆಗಿವೆ ಎಂದು ನೀವೇ ಪರೀಕ್ಷಿಸಿ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾಕ್ಕಾಗಿ 17 ಬಿಜೆಪಿ ಸಂಸದರು ಸಂಸತ್‌ ಎದುರು ಧರಣಿ ನಡೆಸಿ ರೈತರ ಹಿತ ಕಾಯಲಿ’ ಎಂದರು.

ನಗರಾಭಿವೃದ್ಧಿ ಸಚಿವ ರೋಷನ್ ಬೇಗ್‌ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ವೀರಣ್ಣ ಮತ್ತಿಕಟ್ಟಿ, ಅನ್ವರ್‌ ಮುಧೋಳ, ಶಶಿಕಲಾ ಕವಲಿ, ಮಲ್ಲಪ್ಪ ಭಾವಿಕಟ್ಟಿ ಇದ್ದರು.

ಮಲ್ಲಮ್ಮನಿಗೆ ಜ್ಯೋತಿ ಬೆಳಗಲು ಆಹ್ವಾನ

ಹತ್ಯೆಗೀಡಾದ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ ಗೌಡರ ಅವರನ್ನು ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಿದರು. ಮುಖ್ಯಮಂತ್ರಿ ಬರುವವರೆಗೂ ಮಲ್ಲಮ್ಮ ವೇದಿಕೆ ಕೆಳಗಡೆ ಇದ್ದರು. ಮುಖ್ಯಮಂತ್ರಿ ವೇದಿಕೆಗೆ ಬಂದಾಗ ಅವರು ಮೇಲೆ ಏರಲು ಮುಂದಾದರು. ಆದರೆ, ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ಸಚಿವ ವಿನಯ ಕುಲಕರ್ಣಿ ಹೋಗಿ ಅವರನ್ನು ಕರೆತಂದರು. ನಂತರ ಗಣ್ಯರ ನಡುವೆ ನಿಂತು ದೀಪ ಬೆಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.