ಧಾರವಾಡ: ಹುಬ್ಬಳ್ಳಿ– ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ ಲಕ್ಷ್ಮಣ ದೊಡ್ಡಮನಿ, ಎದೆ ಮೇಲೆ ನಾಯಿ ಹಾಗೂ ಬೆನ್ನಿನ ಮೇಲೆ ಕತ್ತೆಯ ಚಿತ್ರ ಅಂಟಿಸಿಕೊಂಡು ಬಂದು ಗಮನ ಸೆಳೆದರು.
ಚಕ್ಕಡಿಯಲ್ಲಿ ಬಂದ ದೊಡ್ಡಮನಿ, ತಮ್ಮ ದೇಹದ ಮೇಲೆ ಅಂಟಿಸಿಕೊಂಡಿದ್ದ ಪೋಸ್ಟರ್ ಪ್ರದರ್ಶಿಸಿದರು.ನಂತರ ಮಾತನಾಡಿದ ಅವರು, ‘ಈವರೆಗೂ ಚುನಾವಣೆ ಗೆದ್ದಿರುವ ಜನಪ್ರತಿನಿಧಿಗಳು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಿತಿ ಮೀರಿ ಆಸ್ತಿ ಹೆಚ್ಚಿಸಿಕೊಂಡಿದ್ದಾರೆ. ಜನಸೇವೆಗಾಗಿ ಬಂದವರ ಆಸ್ತಿ ಹೇಗೆ ಹೆಚ್ಚಾಗುತ್ತದೆ ಎಂಬ ಗೊಂದಲ ನನ್ನೊಬ್ಬನಿಗೆ ಮಾತ್ರವಲ್ಲ ಜನರಲ್ಲೂ ಇದೆ. ಹೀಗಾಗಿ, ನಾನು ಈ ಬಾರಿ ಶುದ್ಧ ಜನಸೇವೆಗಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದರು.
‘ಗೆದ್ದರೆ ಹಗಲಿರುಳು ಕ್ಷೇತ್ರದ ಜನತೆಯ ಕೆಲಸವನ್ನು ಕತ್ತೆಯಂತೆ ದುಡಿದು ಮಾಡುತ್ತೇನೆ. ನಾಯಿಯಂತೆ ಅವರ ಕಾವಲು ಕಾಯುತ್ತೇನೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕನಾಗಿ ಎಲ್ಲ ವರ್ಗದ ಜನರ ಪರವಾಗಿ ಹೋರಾಟ ಮಾಡಿದ್ದೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.