ADVERTISEMENT

ಕಾರ್ಮಿಕರ ಗೋಳು ಕೇಳುವವರ್‌್ಯಾರು?

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 5:10 IST
Last Updated 4 ಸೆಪ್ಟೆಂಬರ್ 2017, 5:10 IST

ಹುಬ್ಬಳ್ಳಿ: ಬಿಆರ್‌ಟಿಎಸ್ ಕಂಪೆನಿಯು ಡಿಪೊ ಹಾಗೂ ಟರ್ಮಿನಲ್ ಕಾಮಗಾರಿಗಳಿಗಾಗಿ ವಿವಿಧೆಡೆಯಿಂದ ಬಂದ ಕಾರ್ಮಿಕರಿಗೆ ನಗರದ ಉಣಕಲ್–ಹೊಸೂರ ಬೈಪಾಸ್ ರಸ್ತೆಯ ಕಲ್ಲೂರ ತೋಟದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಇಲ್ಲಿ ವಾಸ ಮಾಡುತ್ತಿರುವ ವಲಸೆ ಕಾರ್ಮಿಕರ ವಸತಿ ತಾಣದಲ್ಲಿ ಇಲಿ ಹೆಗ್ಗಣ, ಸೊಳ್ಳೆಗಳ ಕಾಟ ವೀಪರೀತವಿದೆ.

60ರಿಂದ 70 ಕುಟುಂಬಗಳು ನೆಲೆಸಿರುವ ಕಲ್ಲೂರ ಅವರ ತೋಟದಲ್ಲಿ ಬಿಆರ್‌ಟಿಎಸ್ ವಸತಿ ಕಲ್ಪಿಸಿದೆ. ಆದರೆ, ವಸತಿ ಸ್ಥಳದಲ್ಲಿ ಸ್ವಚ್ಛತೆ, ಸುರಕ್ಷತೆಯ ಸೌಲಭ್ಯಗಳು ಮರೀಚಿಕೆಯಾಗಿವೆ.

ಕಾರ್ಮಿಕರ ಶೌಚಾಲಯಗಳಿಗೆ ಬಾಗಿಲು ಇಲ್ಲ. ಪಕ್ಕದಲ್ಲೇ ಕೊಳಚೆ ನೀರು ಹರಿದು ಹೋಗುತ್ತದೆ. ಕತ್ತಲಾದರೆ ಸೊಳ್ಳೆಗಳ ಕಾಟ  ಎನ್ನುತ್ತಾರೆ ಮಹಾರಾಷ್ಟ್ರದ ಹಿಂಗೋಲಿಯ ಗಂಗಾ ಸಾಗರ.

ADVERTISEMENT

‘ನಮಗೆ ಇರಲು ಜಾಗ ಕೊಟ್ಟಿದ್ದಾರೆ. ಆದರೆ, ಶೌಚಾಲಯಗಳಿಗೆ ಬಾಗಿಲುಗಳಿಲ್ಲ. ಬೆಳಕು ಹರಿಯುವುದರೊಳಗೆ ಹೆಣ್ಣು ಮಕ್ಕಳು ಶೌಚಕ್ಕೆ ಹೋಗಬೇಕು. ಇದರಿಂದ ನಮಗೆಲ್ಲ ಬಹಳ ತೊಂದರೆ ಆಗುತ್ತಿದೆ’ ಎನ್ನುತ್ತಾರೆ ಕೆರೊಟಗಿ ತಾಂಡಾದ ರೇಣುಕಾ.

‘ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು  ಗುತ್ತಿಗೆದಾರರು ಕರೆತರುತ್ತಾರೆ. ಅವರಿಗಾಗಿ ಶೌಚಾಲಯ, ವಸತಿ, ವಿದ್ಯುತ್. ನೀರಿನ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿಯವರೆಗೂ ಶೌಚಾಲಯದ ಅವ್ಯವಸ್ಥೆ ನಮ್ಮ ಗಮನಕ್ಕೆ ಬಂದಿಲ್ಲ’ ಎನ್ನುತ್ತಾರೆ ಬಿಆರ್‌ಟಿಎಸ್‌ ಕಾಮಗಾರಿಯನ್ನು ಗುತ್ತಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ರಾಜದೀಪ ಕಂಪೆನಿಯ ನೌಕರ ಸಚಿನ್ ಕಾಂಬಳೆ.

* * 

ನಮ್ಮ ವಸತಿ ಪಕ್ಕ ಕೊಳಚೆ ನೀರು ಹರಿದು ಹೋಗುತ್ತದೆ. ಇದರಿಂದ ವಿಪರೀತ ಸೊಳ್ಳೆ ಕಾಟ. ಇಲಿ, ಹೆಗ್ಗಣಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ
ಸವಿತಾ ಕೆರೊಟಗಿ
ಕಾರ್ಮಿಕ ಮಹಿಳೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.