ಹುಬ್ಬಳ್ಳಿ: ನಗರದ ವಿವಿಧೆಡೆ ಸ್ವಂತ ಖರ್ಚಿನಲ್ಲಿ ಆಧುನಿಕ ಮಾದರಿ ಕಸದ ಡಬ್ಬಿಗಳನ್ನು ಅಳವಡಿಸುವ ಮೂಲಕ ಇಲ್ಲಿನ ವಿಶ್ವೇಶ್ವರನಗರದ ನಿವಾಸಿ
ಯೊಬ್ಬರು, ಸ್ವಚ್ಛ ಭಾರತ ಅಭಿಯಾನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ವಿಶ್ವನಾಥ ಶಂಕರಗೌಡ ಪಾಟೀಲ ಎಂಬುವರು ವಿಶ್ವೇಶ್ವರ ನಗರದ ವಿಶ್ವನಾಥ ಕಲ್ಯಾಣಮಂಟಪ, ಹೆಬಸೂರ ಭವನ ಹಾಗೂ ಸಿದ್ಧಾರೂಢಮಠದ ಎದುರು ಕಸದ ಡಬ್ಬಿಯನ್ನು ಅಳವಡಿಸಿದ್ದಾರೆ.
‘ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕು ಎಂಬ ಉದ್ದೇಶವಿತ್ತು. ಅಲ್ಲದೆ, ಸ್ವಚ್ಛ ಭಾರತ ಅಭಿಯಾನಕ್ಕೆ ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು ಎಂಬ ಹಂಬಲದಿಂದ ಕಸದ ಡಬ್ಬಿಗಳನ್ನು ಅಳವಡಿಸಿದ್ದೇನೆ. ಮೂರು ಡಬ್ಬಿಗಳ ಅಳವಡಿಕೆಗೆ ಅಂದಾಜು ₹1 ಲಕ್ಷ ವೆಚ್ಚವಾಗಿದೆ’ ಎಂದು ವಿಶ್ವನಾಥ ಪಾಟೀಲ ಹೇಳಿದರು.
‘ಪಾಲಿಕೆ ವತಿಯಿಂದ ನಗರದ ಅಲ್ಲಲ್ಲಿ ಅಳವಡಿಸಲಾಗಿರುವ ಕಸದ ಡಬ್ಬಿಗಳ ಬಳಿ ಹೋಗಲೂ ಆಗದಷ್ಟು ಅವು ಹಾಳಾಗಿವೆ. ನಾಯಿ–ಹಂದಿಗಳ ಸುತ್ತುತ್ತಿವೆ. ಆದರೆ, ವಿಶ್ವನಾಥ ಅವರು ಅಳವಡಿಸಿರುವ ಕಸದ ಡಬ್ಬಿ ಆಧುನಿಕವಾಗಿದ್ದು, ತುಂಬಾ ಸ್ವಚ್ಛ ಇವೆ. ಉತ್ತಮ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ವಿಶ್ವೇಶ್ವರನಗರ ನಿವಾಸಿ ವಿಜಯಕುಮಾರ ಅಗಸಿಮನಿ ಹೇಳಿದರು.
‘ಪಾಲಿಕೆಯ ವತಿಯಿಂದ ಹೊಸದಾಗಿ ಅಳವಡಿಸಲಾಗಿರುವ ಕಸದ ಡಬ್ಬಿಗಳಲ್ಲಿ ಅಂದಾಜು 15ರಿಂದ 20 ಕೆಜಿಯಷ್ಟು ಮಾತ್ರ ಕಸ ಹಾಕಬಹುದು. ಆದರೆ, ಈ ಡಬ್ಬಿಗಳಲ್ಲಿ 100 ಕೆಜಿಗೂ ಹೆಚ್ಚು ಕಸ ಹಿಡಿಯುತ್ತವೆ. ಅಲ್ಲದೆ, ವಿಲೇವಾರಿಯೂ ಸುಲಭವಾಗಿ ಆಗುತ್ತಿದೆ’ ಎಂದು ಅವರು ಹೇಳಿದರು.
‘ಒಂದು ಕಸದ ಡಬ್ಬಿ ಅಳವಡಿಕೆಯ ವೆಚ್ಚವೂ ಸೇರಿದಂತೆ ₹30 ಸಾವಿರ ಖರ್ಚು ಮಾಡಲಾಗಿದೆ. ನನ್ನ ಕಲ್ಪನೆಯಂತೆ ಕಾರ್ಮಿಕರ ಸಹಾಯದಿಂದ ಅಭಿವೃದ್ಧಿ ಪಡಿಸಲಾಗಿದೆ. ಎರಡರಿಂದ ಮೂರು ನಿಮಿಷಗಳ ಅವಧಿಯಲ್ಲಿ ಕಸವನ್ನು ಡಬ್ಬಿಯಿಂದ ಹೊರ ತೆಗೆಯಬಹುದಾಗಿದೆ. ಡಬ್ಬಿ ಅಳವಡಿಸಿದವರೇ ಕಸದ ವಿಲೇವಾರಿಯನ್ನೂ ಮಾಡುತ್ತಿದ್ದಾರೆ’ ಎಂದು ವಿಶ್ವನಾಥ ಪಾಟೀಲ ಹೇಳಿದರು.
‘ಯಾವುದಾದರೂ ಸರ್ಕಾರೇತರ ಸಂಸ್ಥೆ ಕೈ ಜೋಡಿಸಿ ₹15 ಲಕ್ಷ ನೀಡಿದರೆ, ಅವಳಿ ನಗರದ ವಿವಿಧೆಡೆ ಇಂತಹದೇ ಡಬ್ಬಿಗಳನ್ನು ಅಳವಡಿಸಬಹುದಾಗಿದೆ. ಇಂತಹ ಡಬ್ಬಿಗಳ ಅಳವಡಿಸುವ ಮೂಲಕ ಕಸದ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದಾಗಿದೆ’ ಎಂದು ಹೇಳಿದರು.
**
ವಿಶ್ವನಾಥ ಪಾಟೀಲ ಅವರು ಉತ್ತಮ ಕಾರ್ಯ ಮಾಡಿದ್ದಾರೆ. ಪಾಲಿಕೆಯಿಂದ ಅಳವಡಿಸಲಾಗಿರುವ ಕಸದ ಡಬ್ಬಿಗಳು ದರಕ್ಕೆ ತಕ್ಕ ಗುಣಮಟ್ಟ ಹೊಂದಿವೆ.
–ಶ್ರೀಧರ, ಪಾಲಿಕೆ ಪರಿಸರ, ಎಂಜಿನಿಯರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.