ADVERTISEMENT

‘ಫುಲೆ ಹೋರಾಟ ಸ್ಮರಣೀಯ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:10 IST
Last Updated 3 ಫೆಬ್ರುವರಿ 2017, 6:10 IST
‘ಫುಲೆ ಹೋರಾಟ ಸ್ಮರಣೀಯ’
‘ಫುಲೆ ಹೋರಾಟ ಸ್ಮರಣೀಯ’   

ಹುಬ್ಬಳ್ಳಿ:  ಮಾತೆ ಸಾವಿತ್ರಿಬಾಯಿ ಫುಲೆ ಅವರು ಜೀವನಪರ್ಯಂತ ಬಡವರ ಉದ್ಧಾರಕ್ಕಾಗಿ, ದೀನದಲಿತರ ಶಿಕ್ಷಣಕ್ಕಾಗಿ ಶ್ರಮಿಸಿದರು. ದೇಶದ ಮೊದಲ ಶಿಕ್ಷಕಿಯಾದ ಅವರ ಜೀವನ ಎಲ್ಲರಿಗೂ ಆದರ್ಶವಾದುದು’ ಎಂದು ಮನಸೂರ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಹೇಳಿದರು.

ನಗರದ ಆರ್.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ಸಮಾಜ ದೀನದಲಿತರ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿವೆ. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಅಗತ್ಯವಿದೆ ಎಂದರು.

ಚಿಂತಕ ತಮ್ಮಣ್ಣ ಮಾದರ ಮಾತನಾಡಿ, ವೈಜ್ಞಾನಿಕ ತಳಹದಿಯ ಮೇಲೆ ಸರ್ಕಾರಗಳು ಮಕ್ಕಳಿಗೆ ಶಿಕ್ಷಣ ಕೊಡಬೇಕೇ ವಿನಾ ಧಾರ್ಮಿಕ ತಳಹದಿಯ ಮೇಲೆ ಶಿಕ್ಷಣ ಕೊಡಬಾರದು ಎಂದರು.

ಅಕಾಡೆಮಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚೆಲುವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ದುಮ್ಮಾಳೆ ರಚಿಸಿದ ‘ಸಂತ ಗುರು ರವಿದಾಸವಾಣಿ’ ಹಿಂದಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷ ಹೇಮಂತ ಕುಂದರಗಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ಶಹರ ಬಿಇಓ ಉಮೇಶ ಬೊಮ್ಮಕ್ಕನವರ, ಧಾರವಾಡ ಶಹರ ಬಿಇಓ ಎಸ್.ಎಂ. ಹುಡೇದಮನಿ, ಕುಂದಗೋಳ ಬಿಇಓ ಮಂಗಳಾ ಪಾಟೀಲ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ, ಮೋಹನ ಹಿರೇಮನಿ, ಪ್ರೇಮನಾಥ ಚಿಕ್ಕತುಂಬಳ, ಗುರು ಪೋಳ, ಗಂಗಾಧರ ಪೆರೂರ, ಶೋಭಾ ಬಂಡಿ ಇದ್ದರು. ರತ್ನಾ ಡೊಂಬರ ಸ್ವಾಗತಿಸಿದರು. ಸುಂದರಾ ಎಸ್. ಕರಡಿ, ಕೆ.ವೈ. ಗಂಜಿಗಟ್ಟಿ ನಿರೂಪಿಸಿದರು. ಶಿಕ್ಷಕಿ ಅನಸೂಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.