ಹುಬ್ಬಳ್ಳಿ: ‘ಜೈನ ಧರ್ಮದ ಸ್ಥಾಪಕ ಎಂದು ಹೇಳಲಾಗುವ ಋಷಭನಾಥ ಮುನಿಯ ಪುತ್ರ ಭರತನಿಂದಾಗಿ ‘ಭಾರತ’ ಎಂಬ ಹೆಸರು ದೇಶಕ್ಕೆ ಬಂದಿದೆ’ ಎಂದು ಜೈನಶಾಸ್ತ್ರ ಮತ್ತು ಪ್ರಾಕೃತ ವಿದ್ವಾಂಸ ಮೈಸೂರಿನ ಪ್ರೊ.ಶುಭಚಂದ್ರ ಅಭಿಪ್ರಾಯಪಟ್ಟರು.ನಗರದ ಕಂಚಗಾರ ಗಲ್ಲಿಯ ಆದಿನಾಥ ದಿಗಂಬರ ಜೈನ ಬಸದಿಯ ವಾರ್ಷಿಕ ಪೂಜೆಯ ಅಂಗವಾಗಿ ಆದಿನಾಥ ದಿಗಂಬರ ಜಿನಮಂದಿರ ಸೇವಾ ಟ್ರಸ್ಟ್ ಕಮಿಟಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೈನ ಧರ್ಮದ ಸ್ಥಾಪಕ ಮಹಾವೀರ ಎಂದೇ ಬಹುತೇಕರು ತಿಳಿದುಕೊಂಡಿದ್ದಾರೆ. ಶಾಲೆಯಲ್ಲೂ ಇದನ್ನೇ ಕಲಿಸಲಾಗುತ್ತದೆ. ಹೀಗಾಗಿ ಋಷಭನಾಥನ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಋಷಭನಾಥನ ಬಗ್ಗೆ ವೈದಿಕ ಪುರಾಣಗಳಲ್ಲಿ ಕೂಡ ಉಲ್ಲೇಖ ಇದೆ. ಭೋಗಭೂಮಿಯ ಕಲ್ಪನೆಯಿಂದ ಜನರನ್ನು ಕರ್ಮಭೂಮಿಯ ಪರಿಕಲ್ಪನೆಯ ಕಡೆಗೆ ಕೊಂಡೊಯ್ದವರು ಋಷಭನಾಥರು’ ಎಂದು ಅವರು ಹೇಳಿದರು.
‘ದೇವರಿಗೆ ಮೊರೆ ಹೋಗಿ ಬೇಡುವವರು ಬಿಕಾರಿಗಳು. ತೀರ್ಥಂಕರರು ಕೊಡುವವರಲ್ಲ; ಮಾರ್ಗ ತೋರಿಸುವವರು. ಆದ್ದರಿಂದ ಅವರಲ್ಲಿ ಏನೂ ಕೇಳಬಾರದು. ಅವರನ್ನು ಸ್ತುತಿಸಬೇಕು’ ಎಂದು ಸಲಹೆ ನೀಡಿದರು.ಜಂಗಲ್ವಾಲೆ ಬಾಬಾ ಎಂದೇ ಕರೆಯಲಾಗುವ ಚಿನ್ಮಯಸಾಗರ ಮಹಾರಾಜ್ ಆಶೀರ್ವಚನ ನೀಡಿದರು.
‘ಜೈನ ಧರ್ಮ ಯಾವುದೇ ವ್ಯಕ್ತಿ, ತತ್ವದ ಮೇಲೆ ನೆಲೆ ನಿಂತಿಲ್ಲ. ಆರೋಗ್ಯವಂತ ಸಮಾಜದ ನಿರ್ಮಾಣವೇ ಈ ಧರ್ಮದ ಉದ್ದೇಶ’ ಎಂದು ಅವರು ಹೇಳಿದರು. ಪಾರಸ್ ಚಾನಲ್ನ ವ್ಯವಸ್ಥಾಪಕ ನಿರ್ದೇಶಕಿ ಸುಮಲತಾ ಮೋದಿ, ಆದಿನಾಥ ಮಹಿಳಾ ಸಮಾಜದ ಅಧ್ಯಕ್ಷೆ ತ್ರಿಶಲಾ ಮಾಲಗತ್ತಿ, ಆದಿನಾಥ ಯುವಕ ಮಂಡಳದ ಅಧ್ಯಕ್ಷ ಕುಶಾಲ ಆಣೇಕಾರ, ಶ್ರಾವಕಿ ವಿಮಲಾತಾಯಿ ಎಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.