ಧಾರವಾಡ: ‘ಸಚಿವ ವಿನಯ ಕುಲಕರ್ಣಿಗೆ ಅಂಕಗಣಿತದ ಜ್ಞಾನ ಇಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಲ್ಲೆಗೆ ನೀಡಿದ ಅನುದಾನ ಎಷ್ಟು ಎಂಬುದು ತಿಳಿದಿಲ್ಲ’ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್ ಟೀಕಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಪಕ್ಷದ ಕಾರ್ಯಕರ್ತರ ಚಿಂತನ–ಮಂಥನ ಸಭೆಯಲ್ಲಿ ಅವರು ಮಾತನಾಡಿದರು.‘ಹುಬ್ಬಳ್ಳಿ ಧಾರವಾಡ ಸೇರಿದಂತೆ ಇಡೀ ರಾಜ್ಯದ ನವೋದಯ ಆಗಬೇಕಾದರೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ’ ಎಂದರು.
‘ಅವಳಿ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ₹368 ಕೋಟಿ ನೀಡಿದೆ. 70 ವರ್ಷದಿಂದ ಇಷ್ಟು ದೊಡ್ಡ ಮೊತ್ತದ ಹಣ ಈಗ ಬಿಡುಗಡೆಯಾಗಿದೆ. ಅದರಲ್ಲೂ ಅವಳಿ ನಗರಕ್ಕೆ ದೊಡ್ಡ ಮೊತ್ತದ ಹಣ ಹರಿದುಬಂದಿದೆ. ಈಗ ಕೇವಲ ಡಾಂಬರೀಕರಣಕ್ಕಲ್ಲ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಮೊದಲ ಬಾರಿಗೆ ಹಣ ನೀಡಲಾಗಿದೆ’ ಎಂದರು.
‘ಕೇಂದ್ರ ಹಣ ನೀಡಿದರೂ ತಡವಾಗಿ ಟೆಂಡರ್ ಕರೆಯುವ ಮೂಲಕ ಜಿಲ್ಲಾ ಮಂತ್ರಿ ಅಭಿವೃದ್ಧಿ ವಿಷಯದಲ್ಲಿ ಆಟವಾಡುತ್ತಿರುವುದು ಸರಿಯಲ್ಲ. ಕೇಂದ್ರ ಹಣ ನೀಡಿದರೂ ಆರೂವರೆ ಕೋಟಿ ಜನರಿಗೆ ಅನ್ಯಾಯ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಬಾರದು’ ಎಂದು ಹೇಳಿದರು.
ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಮೇಯರ್ ಡಿ.ಕೆ.ಚವ್ಹಾಣ, ಮಾಜಿ ಶಾಸಕಿ ಸೀಮಾ
ಮಸೂತಿ, ಪಾಲಿಕೆ ಸದಸ್ಯ ಶಿವು ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.