ADVERTISEMENT

ಸಾತ್ವಿಕ ವಿಚಾರ ಎಲ್ಲೆಡೆ ಹರಡಲಿ

ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 5:38 IST
Last Updated 2 ಫೆಬ್ರುವರಿ 2017, 5:38 IST
ಸಾತ್ವಿಕ ವಿಚಾರ ಎಲ್ಲೆಡೆ ಹರಡಲಿ
ಸಾತ್ವಿಕ ವಿಚಾರ ಎಲ್ಲೆಡೆ ಹರಡಲಿ   

ಧಾರವಾಡ: ‘ಗ್ರಂಥಗಳಲ್ಲಿನ ಮೌಲಿಕ ಸಂದೇಶಗಳನ್ನು ಜನಮನಕ್ಕೆ ತಲುಪಿಸಿದಾಗ ಮಾತ್ರ ಜನರಿಂದ ಸಾತ್ವಿಕ ವಿಚಾರಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಮುರಘಾಮಠದ ಆವರಣದಲ್ಲಿ ಮುರಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಪರಿಷೆ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗೃಂಥಮಾಲೆಯ 10 ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಮಕ್ಕಳು ಹಾಗೂ ಕುಟುಂಬಸ್ಥರು ಮನೆಯ ಕಪಾಟಿನಲ್ಲಿ ಪುಸ್ತಕಗಳನ್ನು ಇಟ್ಟು ಧೂಳು ಹಿಡಿಯುವಂತೆ ಮಾಡಿದ್ದಾರೆ. ಆದರೆ, ಅವುಗಳನ್ನು ಹೊರ ತೆಗೆದು ಅದರಲ್ಲಿರುವ ಮೌಲ್ಯಯುತ ಸಂದೇಶಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಇಂದಿನ ಯುವ ಜನರು ಜಾತ್ರಾ ಮಹೋತ್ಸವ ಎಂದರೆ ಕೇವಲ ಮೋಜು ಎನ್ನುವಂತಾಗಿದೆ. ಇದೊಂದು ಸಂಸ್ಕಾರಯುತ ಹಾಗೂ ಧಾರ್ಮಿಕ ಸಂಸ್ಕಾರ ಎಂಬುದನ್ನು ತಿಳಿಯಬೇಕು. ಇತ್ತೀಚೆಗೆ ಟಿ.ವಿ. ಮಾಧ್ಯಮದಲ್ಲಿ ಬರುತ್ತಿರುವ ಅಪರಾಧ ಸುದ್ದಿಗಳಿಂದ ಯುವ ಜನರು ಹಾದಿ ತಪ್ಪುತ್ತಿದ್ದಾರೆ. ಕಂಬಳ, ಜೆಲ್ಲಿಕಟ್ಟು ಎನ್ನುವ ಮೋಜಿಗೆ ಮಹತ್ವ ಕೊಡುವ ಬದಲಾಗಿ ಸಾತ್ವಿಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಪ್ರಾಣಿಗಳಿಗೆ ಹಿಂಸೆ ನೀಡುವ ಜಾತ್ರೆಗಳು ಜಾತ್ರೆಗಳಲ್ಲ. ಈ ನಿಟಿನಲ್ಲಿ ಯುವ ಜನರು ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರಘಾ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಟ್ರಸ್ಟ್‌ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ, ಸಿದ್ದರಾಮಣ್ಣ ನಡಕಟ್ಟಿ, ರಾಜು ಮರಳಪ್ಪನವರ, ಮಮತಾ ನಾಡಗೌಡ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಶಿವಾನುಭವ ಸಂಸ್ಥೆಯ 74ನೇ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಶಸ್ತಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.