ADVERTISEMENT

ಹೊನಲು ಬೆಳಕಿನ ವೈಭವ

ರಾಜನಗರ ಕೆಎಸ್‌ಸಿಎ ಮೈದಾನ: ಕೆಪಿಎಲ್‌ಗೆ ಸಿದ್ಧತೆ

ವಿಕ್ರಂ ಕಾಂತಿಕೆರೆ
Published 28 ಆಗಸ್ಟ್ 2014, 10:33 IST
Last Updated 28 ಆಗಸ್ಟ್ 2014, 10:33 IST

ಹುಬ್ಬಳ್ಳಿ: ‘ಒಡೆಯರ್‌ ಕೆಪಿಎಲ್‌’ ಟೂರ್ನಿಯ ಆರಂಭಕ್ಕೆ ಮೈಸೂರಿನಲ್ಲಿ ಕ್ಷಣಗಣನೆ ಆರಂಭವಾಗುತ್ತಿದ್ದರೆ ಟೂರ್ನಿಯ ಅಂತಿಮ ಹಂತದ ಪಂದ್ಯಗಳು ನಡೆಯಲಿರುವ ಇಲ್ಲಿ ಸಂಘಟಕರ ಉತ್ಸಾಹ ಮುಗಿಲು ಮುಟ್ಟಿದೆ. ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಹೊನಲು ಬೆಳಕಿನ ಸೌಲಭ್ಯದ ದೀಪಗ ಳನ್ನು ಬುಧವಾರ ಅಳವಡಿಸಲಾಯಿತು. ದೀಪಗಳನ್ನು ಹೊತ್ತ ಕಂಬಗಳು ಮೈದಾನದ ನಾಲ್ಕೂ ಮೂಲೆಗಳಲ್ಲಿ ಎದ್ದು ನಿಂತು ಹೊನಲು ಬೆಳಕಿನ ಪಂದ್ಯಗಳಿಗೆ ನಗರ ಸಜ್ಜಾಗಿದೆ ಎಂದು ಸಾರಿದವು.

ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್‌ 9ರಿಂದ ಕೆಪಿಎಲ್ ಟೂರ್ನಿಯ ಸೆಮಿಫೈನಲ್‌ ಮತ್ತು ಫೈನಲ್‌ ಸೇರಿದಂತೆ ಒಟ್ಟು ಏಳು ಪಂದ್ಯಗಳು ನಡೆಯಲಿವೆ. ಈಗಾಗಲೇ ಈ ಮೈದಾನದಲ್ಲಿ ನಡೆದ ಲಿಸ್ಟ್‌ ‘ಎ’ ಮತ್ತು ರಣಜಿ ಪಂದ್ಯಗಳು ಯಶಸ್ವಿಯಾಗಿದ್ದವು. ಹೊನಲು ಬೆಳಕಿನ ಸೌಲಭ್ಯವೂ ಬಂದ ಕಾರಣ ಈಗ ಎಲ್ಲ ಬಗೆಯ ಕ್ರಿಕೆಟ್‌ಗೆ ಆತಿಥ್ಯ ವಹಿಸಲು ನಗರ ಸಿದ್ಧವಾದಂತಾಗಿದೆ.

ರಾಜನಗರದಲ್ಲಿರುವ ಮೈದಾನದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೆಎಸ್‌ಸಿಎ ವಿಶೇಷ ಸಾಮಾನ್ಯ ಸಭೆಯಲ್ಲಿ ರೂ 25 ಕೋಟಿ ಮಂಜೂರು ಮಾಡಲಾಗಿದೆ. ಕೆಪಿಎಲ್‌ಗೆ ಬೇಕಾದ ಸೌಲಭ್ಯ ಒದಗಿಸುವ ಕಾಮಗಾರಿ ಇಲ್ಲಿ ಇದಕ್ಕೂ ಮೊದಲೇ ಆರಂಭವಾಗಿತ್ತು. ಇದೀಗ ಮೈದಾ ನದಲ್ಲಿ ಅಗತ್ಯ ಕಾಮಗಾರಿಗಳು ಬಹುತೇಕ ಪೂರ್ಣ ಗೊಂಡಿದ್ದು ಅಂತಿಮ ಸಿದ್ಧತೆಗಳು ಮಾತ್ರ ಉಳಿದು ಕೊಂಡಿವೆ. ಅಂಗಣಕ್ಕೆ ಇದೇ ಮೊದಲ ಬಾರಿ ತಂತಿ ಬೇಲಿ ಅಳವಡಿಸಲಾಗಿದೆ.

ಸ್ಟಂಪ್ಸ್‌ಗೆ ಕ್ಯಾಮೆರಾ ಮತ್ತು ಮೈಕ್ರೋಫೋನ್‌ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಪೆವಿಲಿಯನ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ನೆರಳಿನ ವ್ಯವಸ್ಥೆ (ಕೆನೊಪಿ) ಕಲ್ಪಿಸಲಾಗುತ್ತಿದೆ. ಈಗ ಇಲ್ಲಿ ನಾಲ್ಕು ಗೇಟ್‌ಗಳಿದ್ದು ಕೆಪಿಎಲ್‌ ಟೂರ್ನಿ ಸಂದರ್ಭದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಒಂದು ಹೆಚ್ಚುವರಿ ಗೇಟ್‌ ತೆರೆ ಯಲಾಗುತ್ತಿದೆ. ಇದೇ ಮೊದಲ ಬಾರಿ ಹುಬ್ಬಳ್ಳಿಯಿಂದ ಪಂದ್ಯವೊಂದರ ನೇರ ಪ್ರಸಾರ ನಡೆಯಲಿದ್ದು ಅದರ ಸಿದ್ಧತೆಗಳು ಕೂಡ ಜೋರಾಗಿಯೇ ನಡೆದಿವೆ.

‘ಕೆಪಿಎಲ್‌ಗೆ ಬೇಕಾದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ದೊಡ್ಡ ಟೂರ್ನಿಯೊಂದರ ಮಹತ್ವದ ಪಂದ್ಯಗಳನ್ನು ನಡೆಸುವ ಅವಕಾಶ ಹುಬ್ಬಳ್ಳಿಗೆ ಒದಗಿರುವುದರಿಂದ ಆದಷ್ಟು ಮುಂಚಿತ ವಾಗಿಯೇ ಸಿದ್ಧತೆಗಳನ್ನು ನಡೆಸಿದ್ದೇವೆ. ಪಂದ್ಯಗಳು ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಇರುವಾಗ ಗ್ಯಾಲರಿ ಅಳವಡಿಸಲಾಗುವುದು’ ಎಂದು ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ಬಾಬಾ ಭೂಸದ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.