ADVERTISEMENT

ಗದಗ ಜಿಲ್ಲೆಯಾದ್ಯಂತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 5:23 IST
Last Updated 29 ಆಗಸ್ಟ್ 2017, 5:23 IST

ಗದಗ: ಮೋಡ ಬಿತ್ತನೆಗಾಗಿ ಗದಗ–ಹುಬ್ಬಳ್ಳಿ ರಸ್ತೆಯಲ್ಲಿ ರೇಡಾರ್‌ ಕೇಂದ್ರ ಸ್ಥಾಪನೆಯಾದ ಬೆನ್ನಲ್ಲೇ, ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ.
ಜಿಲ್ಲಾ ಕೇಂದ್ರ ಗದುಗಿನಲ್ಲಿ ಅರ್ಧ ಗಂಟೆ ಕಾಲ ಮಳೆ ಸುರಿಯಿತು. ನರೇಗಲ್‌ನಲ್ಲೂ ಒಂದು ಗಂಟೆ ಕಾಲ ಗಾಳಿ ಸಹಿತ ಮಳೆ ಆರ್ಭಟಿಸಿತು. ಶಿರಹಟ್ಟಿ, ಲಕ್ಷ್ಮೇಶ್ವರದಲ್ಲೂ ಸಾಮಾನ್ಯ ಮಳೆಯಾಗಿದೆ.  ಗಜೇಂದ್ರಗಡ, ರೋಣ ದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ.

ಕಳೆದೆರಡು ವಾರಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಭರವಸೆ ಮೂಡಿದೆ. ಮಂಗಾರಿನ ಆರಂಭದಲ್ಲಿ ಮಳೆ ಕೊರತೆಯಿಂದ ಹೆಸರು ಮತ್ತು ಶೇಂಗಾ ಬೆಳೆಯಲ್ಲಿ ಆಗಿರುವ ನಷ್ಟವನ್ನು ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಯಲ್ಲಿ ಭರ್ತಿ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮುಳಗುಂದ, ನರೇಗಲ್‌, ಲಕ್ಷ್ಮೇಶ್ವರ, ರೋಣ ಪ್ರದೇಶಗಳಲ್ಲಿ ರೈತರು ಈಗಾಗಲೇ ಈರುಳ್ಳಿ ಮತ್ತು ಮೆಣಸಿನಕಾಯಿ ಬಿತ್ತಿದ್ದು, ಮೊಳಕೆಯ ಹಂತದಲ್ಲಿವೆ. ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಕೆಲವೆಡೆ ಬಿತ್ತನೆ ಇನ್ನಷ್ಟೇ ಆರಂಭವಾಗಬೇಕಿದೆ.

ADVERTISEMENT

ಆಗಸ್ಟ್‌ ತಿಂಗಳ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 75.4 ಮಿ.ಮೀ. ಇದುವರೆಗೆ 71.8 ಮಿ.ಮೀಯಷ್ಟು ಮಳೆ ಲಭಿಸಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ 70.6 ಮಿ.ಮೀ ಎದುರು 35.2 ಮಿ.ಮೀಯಷ್ಟೇ ಮಳೆ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.