ರೋಣ: ಬಾಲ್ಯವಿವಾಹ ತಡೆಗಟ್ಟಿ, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ, ಆರೋಗ್ಯದತ್ತ ಗಮನ ನೀಡಿದರೆ ಮಕ್ಕಳು ಆರೋಗ್ಯವಂತರಾಗುತ್ತಾರೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ ತೇಲಿ ಹೇಳಿದರು. ತಾಲ್ಲೂಕಿನ ಹಿರೇಹಾಳ ಗ್ರಾಮದಲ್ಲಿ ಶುಕ್ರವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಕುರಿತು ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಸುರೇಶ ಮಾತನಾಡಿ, ಗರ್ಭಿಣಿಯರು ಆಶಾ ಕಾರ್ಯಕರ್ತೆರು, ಕಿರಿಯ ಮಹಿಳಾ ಆರೋಗ್ಯ ಸಹಾಕಿಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರ ಬಳಿ ತಮ್ಮ ಹೆಸರನ್ನು ದಾಖಲಿಸಿ ಉತ್ತಮ ಆರೋಗ್ಯ ಸೇವೆ ಪಡೆಯಬಹುದು. ಇದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡಬಹುದು ಹಾಗೂ ಆರೋಗ್ಯಯುತ ಮಗುವನ್ನು ಪಡೆಯಬಹುದು ಎಂದರು.
ಜನನದಿಂದ– ಆರು ತಿಂಗಳವರೆಗ ಮಗುವಿಗೆ ಕೇವಲ ತಾಯಿಯ ಹಾಲನ್ನೇ ಕೊಡಬೇಕು, ಆರು ತಿಂಗಳಿನಿಂದ ಎರಡು ವರ್ಷದವರೆಗೆ ತಾಯಿ ಎದೆ ಹಾಲಿನ ಜತೆಗೆ ಪೂರಕ ಆಹಾರ ಒದಗಿಸಬೇಕು. ಎರಡು ಹೆರಿಗೆಯ ನಡುವೆ ಕನಿಷ್ಠ ಮೂರು ವರ್ಷ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ, ಹಿರೇಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಬೇವಿನಗಿಡದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಕಲ್ಲನ್ನಗೌಡರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.