ADVERTISEMENT

ಗುಡಿಸಲಿಗೆ ಬೆಂಕಿ: ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:43 IST
Last Updated 23 ಮಾರ್ಚ್ 2018, 10:43 IST

ಮುಳಗುಂದ (ಗದಗ ಜಿಲ್ಲೆ): ಸಮೀಪದ ನೀಲಗುಂದ ಗ್ರಾಮದ ಹೊಲದಲ್ಲಿ ಗುರುವಾರ ಗುಡಿಸಲಿಗೆ ಬೆಂಕಿ ತಗುಲಿ, ಏಳು ವರ್ಷದ ರೇಣುಕಾ ಶರಣಪ್ಪ ಚಿಂಚಲಿ ಸುಟ್ಟು ಕರಕಲಾಗಿದ್ದಾಳೆ.

‘ಕೊಪ್ಪಳ ಜಿಲ್ಲೆ ಮತ್ತೂರ ಗ್ರಾಮದ ಬಾಲಕಿ ರೇಣುಕಾ ಹಾಗೂ ಆಕೆಯ ಅಣ್ಣ ನಿಂಗರಡ್ಡಿ, ತಾಯಿಯ (ಲಕ್ಷ್ಮಿ) ತವರು ಮನೆ ನೀಲಗುಂದದ ಅಜ್ಜ– ಅಜ್ಜಿ ಮನೆಗೆ ಬಂದಿದ್ದರು. ಅಜ್ಜ– ಅಜ್ಜಿ ಜತೆ ಬಾಲಕ, ಬಾಲಕಿ ಹೊಲಕ್ಕೆ ತೆರಳಿದ್ದರು. ಹೊಲದಲ್ಲಿದ್ದ ಗುಡಿಸಲಿನಲ್ಲಿ ಆಟ ಆಡುವಾಗ ಬಾಲಕ ನಿಂಗರಡ್ಡಿ ಆಕಸ್ಮಿಕವಾಗಿ ಬೆಂಕಿಕಡ್ಡಿ ಗೀರಿದ್ದಾನೆ. ಬೆಂಕಿಯ ಕಿಡಿ ಆಕಸ್ಮಿಕವಾಗಿ ಗುಡಿಸಲಿಗೆ ತಗುಲಿದೆ. ಆಗ ಬಾಲಕ ಗುಡಿಸಲಿನಿಂದ ಹೊರಕ್ಕೆ ಓಡಿ ಬಂದರೆ, ಬಾಲಕಿ ತನಗೇನೂ ಆಗುವುದಿಲ್ಲ ಎಂದು ಗುಡಿಸಲಿನಲ್ಲಿದ್ದ ಪ್ಲಾಸ್ಟಿಕ್ ತಾಡಪತ್ರಿ ಹೊದ್ದು ಕೂತಿದ್ದಾಳೆ. ಗುಡಿಸಲಿಗೆ ಪೂರ್ಣ ಬೆಂಕಿ ತಾಗಿದಾಗ ಉರಿಯುತ್ತಿರುವ ಗುಡಿಸಲು ಬಾಲಕಿ ಮೇಲೆ ಬಿದ್ದು, ಅವಘಡ ನಡೆದಿದೆ. ಈ ಸಂದರ್ಭದಲ್ಲಿ ಅಜ್ಜ– ಅಜ್ಜಿ ಹೊಲದ ಕೆಲಸದಲ್ಲಿ ನಿರತರಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಾಯಿ ಲಕ್ಷ್ಮಿ ಮುಳಗುಂದ ಠಾಣೆಯಲ್ಲಿ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.