ಡಂಬಳ: ಇಲ್ಲಿನ ರೈತ ಈರಪ್ಪ ಕಾಶಪ್ಪ ಗೋಡೆ ಎಂಬುವರಿಗೆ ಸೇರಿದ 2 ಎಕರೆ ತೊಗರಿ ಬೆಳೆ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ.
ಭಾನುವಾರ ಕೂಲಿಯಾಳುಗಳ ನೆರವಿನಿಂದ ಈರಪ್ಪ, ತೊಗರಿ ಕಟಾವು ಮಾಡಿ, ಹೊಲದಲ್ಲೇ ಒಂದು ಬದಿಯಲ್ಲಿ ಸಂಗ್ರಹಿಸಿದ್ದರು. ಉಳಿದಿದ್ದ ತೊಗರಿ ಕಟಾವು ಮಾಡಲು ಸೋಮವಾರ ಆಳುಗಳೊಂದಿಗೆ ಬಂದಾಗ, ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ತಕ್ಷಣವೇ ಬೆಂಕಿ ನಂದಿಸಲು ತೊಡಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಟಾವು ಮಾಡಿ ಇಟ್ಟಿದ್ದ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
‘ಸತತ ಬರದಿಂದ ಹಿಂದಿನ ವರ್ಷಗಳಲ್ಲಿ ಬೆಳೆ ಬಂದಿರಲಿಲ್ಲ. ಈ ಬಾರಿ ಉತ್ತಮ ಮಳೆ ಆಗಿತ್ತು. ಗ್ರಾಮದ ಕೆರೆಯೂ ತುಂಬಿತ್ತು. ಅದರಿಂದ ಬೆಳೆ ಚೆನ್ನಾಗಿ ಬಂದಿತ್ತು. ಸೋಮವಾರ ಕಟಾವು ಮುಗಿಸಿ, ರಾಶಿ ಮಾಡಬೇಕೆಂದುಕೊಂಡಿದ್ದೆವು. ಆದರೆ, ಯಾರೋ ಬೇಕೆಂದೇ ಬೆಂಕಿ ಹಚ್ಚಿದ್ದಾರೆ’ ಎಂದು ಈರಪ್ಪ ಕಣ್ಣೀರು ಸುರಿಸಿದರು.
‘ಎಕರೆಗೆ ₹20 ಸಾವಿರ ಖರ್ಚಾ ಗಿತ್ತು. ಕನಿಷ್ಠ 5ರಿಂದ 6 ಚೀಲ ತೊಗರಿ ಆಗುತ್ತಿತ್ತು. ‘ಸಂಬಂಧಪಟ್ಟ ಅಧಿಕಾರಿ ಗಳು ಬೆಳೆ ಹಾನಿ ಪರಿಶೀಲಿಸಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.