ಸಕಲೇಶಪುರ: ಲಕ್ಷಾಂತರ ರೂಪಾಯಿ ಮೌಲ್ಯದ ನಾಟಾಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಒಂದು ಲಾರಿ ಹಾಗೂ ಒಂದು ಸರಕು ಸಾಗಣೆ ವಾಹನವನ್ನು ತಾಲ್ಲೂಕಿನ ಬಿಸಿಲೆ ರಕ್ಷಿತ ಅರಣ್ಯದ ಅಂಚಿನಲ್ಲಿರುವ ಮಾವಿನೂರು ಗ್ರಾಮದಲ್ಲಿ ಯಸಳೂರು ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾವಿನೂರು ಗ್ರಾಮದಲ್ಲಿ ಈಚೆಗೆ ಅಕ್ರಮವಾಗಿ ಮರಗಳನ್ನು ಕಡಿದು ನಾಟಾ ದಾಸ್ತಾನು ಮಾಡಿರುವುದು ಯಸಳೂರು ವಲಯ ಅರಣ್ಯ ಅಧಿಕಾರಿ ಮೋಹನ್ ಹಾಗೂ ಸಿಬ್ಬಂದಿ ಗಮನಕ್ಕೆ ಬಂದಿತ್ತು ಎನ್ನಲಾಗಿದೆ.
ಶುಕ್ರವಾರ ರಾತ್ರಿ 11ರ ಸುಮಾರಿಗೆ ನಾಟಾಗಳನ್ನು ತುಂಬಿಸಿಕೊಂಡು ಲಾರಿ ಹೊರಡುತ್ತಿದ್ದಂತೆಯೇ, ಯಸಳೂರು ವಲಯ ಅರಣ್ಯ ಅಧಿಕಾರಿಯಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಅಭಿಲಾಷ್, ಉಪವಲಯ ಅರಣ್ಯ ಅಧಿಕಾರಿ ನಾಗೇಶ್, ಅರಣ್ಯ ರಕ್ಷಕರಾದ ರಘು, ಪ್ರದೀಪ್್, ದೇವೇಂದ್ರಪ್ಪ, ಚಾಲಕ ಭರತ್ ಖಾಸಗಿ ವಾಹನದಲ್ಲಿ ತೆರಳಿ ದಾಳಿ ನಡೆಸಿದರು.
ಲಾರಿ ಚಾಲಕರು ಹಾಗೂ ಅಕ್ರಮ ಸಾಗಣೆದಾರರು ಕಾಡಿನತ್ತ ಓಡಿ ತಲೆ ಮರೆಸಿಕೊಂಡರು. ಆರೋಪಿಗಳ ಸುಳಿವು ಸಿಕ್ಕಿದ್ದು ಪ್ರಕರಣ ದಾಖಲಾಗಿದೆ. ಯಸಳೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಹಿಂದಿನ ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಸಹಕಾರದಿಂದ ಭಾರಿ ಪ್ರಮಾಣದಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು ರಾಜಾರೋಷವಾಗಿ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ರಾಜುಗೌಡ, ಆನಂದ್ ಹಾಗೂ ಹಲವು ಗ್ರಾಮಸ್ಥರು ಈಚೆಗೆ ಆರೋಪ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.