ಹಾಸನ: ಈರುಳ್ಳಿ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದೆ. ಈರುಳ್ಳಿ ಬೆಳೆಯುವ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಭಾಗಗಳಿಂದ ಮಾರುಕಟ್ಟೆಗೆ ಆಮದು ಕಡಿಮೆಯಾದ ಕಾರಣ ಕಳೆದ ವಾರಕ್ಕೆ ಹೋಲಿಸಿದರೆ 5 ರೂಪಾಯಿ ಏರಿದೆ.
ಕಳೆದ ವಾರ ಕೆ.ಜಿ ಈರುಳ್ಳಿ ₹ 25 ರಂತೆ ಮಾರಾಟ ಮಾಡಲಾಗಿತ್ತು. ಈಗ ₹ 30ಕ್ಕೆ ಲಭ್ಯ ಇದೆ. ಹಸಿ ಬಟಾಣಿ ಮತ್ತು ಟೊಮೊಟೊ ಬೆಲೆ ಸ್ಥಿರವಾಗಿದ್ದು, ಕೆ.ಜಿಗೆ ₹ 30 ರಂತೆ ಮಾರಲಾಗುತ್ತಿದೆ.
ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದ ಬಟಾಣಿ, ಕೆಲ ದಿನಗಳ ಹಿಂದಷ್ಟೆ ರೈತರಿಗೆ ಉತ್ತಮ ಆದಾಯ ತಂದು ಕೊಟ್ಟಿತ್ತಾದರೂ, ನೀರಾವರಿ ಹಾಗೂ ಅರೆಮಲೆನಾಡು ಭಾಗದಲ್ಲಿ ಹೆಚ್ಚಾಗಿ ಬೆಳೆದಿರುವ ಕಾರಣ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಬಟಾಣಿ ಆವಕ ಆಗುತ್ತಿದೆ.
ಜಿಲ್ಲೆಯಲ್ಲಿ ತುಂತುರು ಮಳೆ ಆಗುತ್ತಿರುವುದರಿಂದ ತರಕಾರಿ ಬೆಲೆಯಲ್ಲಿ ಅಂತಹ ವ್ಯತ್ಯಾಸ ಕಂಡು ಬಂದಿಲ್ಲ. ವಾರದ ಹಿಂದೆ ಹೀರೆಕಾಯಿ ಕೆ.ಜಿ ಗೆ ₹ 30, ಈರುಳ್ಳಿ ಕೆ.ಜಿ ಗೆ ₹15, ಅವರೆಕಾಯಿ ₹ 30, ಶುಂಠಿ ₹ 40 ರಿಂದ ₹50, ಕ್ಯಾರೆಟ್ ₹ 50 ಹಾಗೂ ಟೊಮೆಟೊ ಕೆ.ಜಿ ಗೆ ₹ 20ಕ್ಕೆ ಮಾರಾಟವಾಗುತ್ತಿದೆ. ಕೊತ್ತಂಬರಿ, ಪಾಲಕ್, ದಂಟು, ಮೆಂತ್ಯ, ಲಾಳಿ ಕಟ್ಟು ಸೊಪ್ಪಿಗೆ ಸರಾಸರಿ ₹5 ರಂತೆ ಮಾರಾಟ ಮಾಡಲಾಗುತ್ತಿದೆ.
‘ಕೆಲ ದಿನಗಳಿಂದ ತುಂತರು ಮಳೆಯಾಗುತ್ತಿದೆ. ಮಾರುಕಟ್ಟೆಗೆ ಬರುತ್ತಿರುವ ತರಕಾರಿಯಲ್ಲಿ ಕಡಿಮೆ ಆಗಿಲ್ಲ. ದರದಲ್ಲೂ ಸ್ಥಿರತೆ ಇದೆ. ಕೆಲವೊಂದು ತರಕಾರಿ ಮತ್ತು ಹಣ್ಣಿನ ದರದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಉಳಿದಂತೆ ಯಥಾಸ್ಥಿತಿ ಇದೆ’ ಎಂದು ಸಗಟು ವ್ಯಾಪಾರಿ ಷರೀಫ್ ಅಹಮದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.