ಹೆತ್ತೂರು: ಕಾಡಾನೆಗಳು ಭಾನುವಾರ ದಾಳಿ ಮಾಡಿದ್ದರಿಂದ ಬನ್ನಹಳ್ಳಿ, ವಳಲಹಳ್ಳಿ ಕೂಡಿಗೆ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಭತ್ತ ಹಾಗೂ ಕಾಫಿ ಹಾನಿಯಾಗಿದೆ.
ಸುಮಾರು 15 ಆನೆಗಳ ಹಿಂಡಿನ ದಾಳಿ ಮಾಡಿ ಹೆತ್ತೂರು ಗ್ರಾಮದ ಗಣೇಶ್ ಅವರಿಗೆ ಸೇರಿದ ಸುಮಾರು 2 ಪ್ರದೇಶದಲ್ಲಿ ಕಾಫಿ ಏಲಕ್ಕಿ, ಅಡಿಕೆ, ಬಾಳೆ, ಶುಂಠಿ ಬೆಳೆಯನ್ನು ನಾಶಪಡಿಸಿದ್ದು ಅಪಾರ ನಷ್ಟ ಸಂಭವಿಸಿದೆ.
ಬನ್ನಹಳ್ಳಿ ಗ್ರಾಮದ ಎಚ್.ಬಿ ವೆಂಕಟೇಶ್, ಬಸವರಾಜು, ಎಚ್.ಎಂ.ಇಂದುಶೇಖರ್, ಎಚ್.ಕೆ.ಪುಟ್ಟಸ್ವಾಮಿಗೌಡ ಅವರ 15 ಎಕರೆಗೂ ಹೆಚ್ಚು ಭತ್ತದ ಗದ್ದೆಯನ್ನು ತಿಂದು ತುಳಿದು ಹಾಕಿವೆ. ಕಾಡಾನೆಗಳು ಗ್ರಾಮದ ಮುಖ್ಯ ರಸ್ತೆಯಲ್ಲೇ ಸಂಚರಿಸುವ ಮೂಲಕ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಷ್ಟಿಯಾಗಿದೆ.
ಸೋಮವಾರ ಕೂಡ ಹೆತ್ತೂರು ಗ್ರಾಮದ ಎಚ್.ಕೆ.ಪ್ರಕಾಶ್ ಅವರ ಕಾಫಿ ತೋಟದಲ್ಲಿ ಆನೆಗಳು ಬೀಡು ಬಿಟ್ಟಿದ್ದು, ಸುತ್ತಮುತ್ತಲಿನ ಜಮೀನಿನ ರೈತರಿಗೆ ಆತಂಕ ಹುಟ್ಟಿಸಿವೆ.
10 ದಿನದಿಂದ ಗ್ರಾಮದ ಹೊರವಲ ಯದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಪ್ರತಿದಿನ ರಾತ್ರಿ ಭತ್ತದ ಗದ್ದೆಗಳಿಗೆ ಇಳಿಯುವ ಮೂಲಕ ಹಾನಿ ಉಂಟುಮಾಡುತ್ತಿವೆ.
ಕಾಡಾನೆಗಳನ್ನು ಬೇರೆಡೆಗೆ ಓಡಿಸಬೇಕು ಎಂದು ಹೋಬಳಿ ಬೆಳೆಗಾರ ಸಂಘದ ಅಧ್ಯಕ್ಷ ಎಂ.ಜೆ.ಸಚ್ಚಿನ್ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.