ಚನ್ನರಾಯಪಟ್ಟಣ: ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಜನಿವಾರ ಕೆರೆಯಲ್ಲಿ ಅಂದಾಜು ₹ 50 ಲಕ್ಷ ವೆಚ್ಚದಲ್ಲಿ ಜಲಕ್ರೀಡೆಗೆ ಸೌಲಭ್ಯ ಕಲ್ಪಿಸಲು ಕಾಮಗಾರಿ ಆರಂಭವಾಗಿದೆ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷಾಧಿಕಾರಿ ಬಿ.ಎನ್. ವರಪ್ರಸಾದರೆಡ್ಡಿ ಹೇಳಿದರು.
ಮಂಗಳವಾರ ಅಧಿಕಾರಿಗಳೊಂದಿಗೆ ತೆಪ್ಪದಲ್ಲಿ ತೆರಳಿ ಕೆರೆ ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿ, ಕೆರೆಯ ವಿಸ್ತೀರ್ಣ 380 ಎಕರೆ ಇದೆ. ಪ್ರವಾಸೋದ್ಯಮ ಇಲಾಖೆ ಈ ಕೆಲಸ ಕೈಗೆತ್ತಿಕೊಂಡಿದ್ದು, ದೋಣಿವಿಹಾರ, ಸಾಹಸ ಕ್ರೀಡೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಶ್ರವಣೇರಿಯ ತೆಂಗು ಬೆಳೆಗಾರರ ಸಂಘ ಕೆರೆಯ ಬಳಿ ಕಲ್ಪಾಮೃತ ಕೇಂದ್ರ ತೆರೆಯಲಿದೆ. ರಸ್ತೆಯ ಪಕ್ಕವೇ ಕೆರೆ ಇರುವುದರಿಂದ ಉತ್ತಮ ಪ್ರವಾಸಿಕೇಂದ್ರವಾಗಲಿದೆ. ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರು ಸೌಲಭ್ಯ ಹಾಗೂ ಕೆರೆ ದಡದಲ್ಲಿ ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ ಒದಗಿಸಲಾಗುವುದು ಎಂದು ಹೇಳಿದರು.
ನಿರ್ಮಿತಿ ಕೇಂದ್ರದ ವತಿಯಿಂದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸ ಲಾಗಿದ್ದು, ಜಲಕ್ರೀಡೆಗೆ ಸಂಬಂಧಿಸಿ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಸ್ತಕಾಭಿಷೇಕದ ನಂತರ ಇದರ ಸೇವೆ ಶಾಶ್ವತವಾಗಿ ಪ್ರವಾಸಿಗರಿಗೆ ದೊರಕಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರಕುಮಾರ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಂತ್ರಣಾಧಿಕಾರಿ ಯಶವಂತ್ಕುಮಾರ್, ತಹಶೀಲ್ದಾರ್ ಸೋಮಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.