ADVERTISEMENT

‘ಪ್ರಾಕೃತ ಭಾಷೆ ಅರಿವು ಪ್ರೇರಕವಾಗಲಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:45 IST
Last Updated 6 ಫೆಬ್ರುವರಿ 2017, 5:45 IST

ಹಾಸನ:  ಪ್ರಾಕೃತಿಕವಾದ ಮತ್ತು ಬಹುಜನರ ಆಡುಭಾಷೆಯಾಗಿದ್ದ  ಪ್ರಾಕೃತವು ಸಂಸ್ಕೃತ ಭಾಷೆಯ ಜೊತೆಗೆ ಉಳಿದುಕೊಳ್ಳುವ ಪ್ರಯತ್ನ ಮಾಡುತ್ತಲೇ ಇದೆ ಎಂದು ಶ್ರವಣಬೆಳಗೊಳದ  ಪ್ರಾಕೃತ ಅಧ್ಯಯನ ಪೀಠದ ಪ್ರವಚಕ ಡಾ. ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಮತ್ತು ಸಂಸ್ಕೃತ ವಿಭಾಗ  ಮತ್ತು ಶ್ರವಣಬೆಳಗೊಳದ ಧವಳತೀರ್ಥಂ ಪ್ರಾಕೃತ ಅಧ್ಯಯನ ಕೇಂದ್ರ ದ ವತಿಯಿಂದ ಆಯೋಜಿಸಿದ್ದ  ವಿಶೇಷ ಪ್ರಾಕೃತ ಪರೀಕ್ಷಾ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ರಿಸ್ತ ಪೂರ್ವ ಯುಗದಲ್ಲಿ ಅದು ಜನ ಸಾಮಾನ್ಯರ ಭಾಷೆಯಾಗಿತ್ತು.  ಬಹು ಸಂಖ್ಯಾತ ಜನರು ಅದನ್ನು ಉಪಯೋಗಿಸುತ್ತಿದ್ದರು. ಅಲ್ಲದೇ ಅದು ಬಹಳ ಸುಲಭವೂ ಮತ್ತು ಸುಲಲಿತವೂ ಆದ ಜನಪ್ರಿಯ ಭಾಷೆಯಾಗಿತ್ತು.  ಆದರೆ ಕಾಲಾಂತರದಲ್ಲಿ ಜನಮನ್ನಣೆಯಿಲ್ಲದೇ ಕೇವಲ ಗ್ರಾಂಥಿಕ ಭಾಷೆಯಾಗಿ ಉಳಿಯಿತು. ಇಂದು ಪ್ರಾಕೃತ ಭಾಷೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಚಾರುಕೀರ್ತಿ ಭಟ್ಟಾರಕ  ಸ್ವಾಮೀಜಿ ನೇತೃತ್ವದಲ್ಲಿ ಪ್ರಾಕೃತ ಭಾಷೆಯನ್ನು ಮತ್ತೆ ಜನರ ಸಂವಹನ ಭಾಷೆಯಾಗಿ ಪರಿಚಯಿಸುವ ಪ್ರಯತ್ನಗಳು ನಡೆಯು
ತ್ತಿದ್ದು,   ಜಿಲ್ಲೆಯಾದ್ಯಂತ  ಶಾಲಾ, ಕಾಲೇಜುಗಳಲ್ಲಿ  ಅಧ್ಯಯನ ಕೇಂದ್ರ ತೆರೆಯಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ಕಲಾ ಕಾಲೇಜಿನ ಡಾ.ವಿದ್ಯಾ ಮಾತನಾಡಿ, ಕಲಾ ಕಾಲೇಜಿನಲ್ಲಿ  ವಿದ್ಯಾರ್ಥಿಗಳ ಕಲಿಕೆ ಪ್ರೋತ್ಸಾಹಿಸಲು ಸರ್ಟಿಫಿಕೆಟ್‌  ಕೋರ್ಸ್‌ಗಳನ್ನು   ಪ್ರಾರಂಭಿಸಲಾಗಿದೆ. ಕಾಲೇಜಿನಲ್ಲಿಯೇ ಪ್ರಾಕೃತ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಆಸಕ್ತರು ಪ್ರಾಕೃತ  ಡಿಪ್ಲೊಮೊ ಕೋರ್ಸ್‌ ಸೇರಲು ಅವಕಾಶವಿದೆ ಎಂದರು.

ಆಧುನಿಕ ಸಂವಹನ ಕಲೆಗಳು ಭಾರತೀಯ ಪರಂಪರೆಯ ಭಾಗವಾಗಿರುವ ಪ್ರಾಕೃತ ಭಾಷೆಯಂತಹ ಹಲವಾರು ಭಾಷೆಗಳಿಗೆ ಮಾರಕವಾಗಿದೆ.  ಪದವಿಯ ಜತೆ ಜತೆಗೆ ಪ್ರಾಕೃತ ಡಿಪ್ಲೊಮಾ ಶಿಕ್ಷಣವನ್ನು ಕಲಿಯಲೂ ಅವಕಾಶ ಇದೆ ಎಂದು ನುಡಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ್ ರಾಜ್ , ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಸ್ಥೆಯ ಮುರುಳಿ , ಡಾ. ಶಾಂತಿ ಸಾಗರ್, ಡಾ. ರಾಜೇಂದ್ರ , ಡಾ. ಸಿದ್ದಾರ್ಥ ಹಾಗೂ ರಿಜಿಸ್ಟ್ರಾರ್ ಓ. ಮಂಜಯ್ಯ  ಹಾಜರಿದ್ದರು.

ಮುರುಳಿ ಸ್ವಾಗತಿಸಿದರು.  ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ. ವೀಣಾ, ಇತಿಹಾಸ ವಿಭಾಗದ ಉಪನ್ಯಾಸಕ ಡಾ ತಿಮ್ಮಪ್ಪಗೌಡ ಮತ್ತು ಅನುಪಮಾ ಹಾಗೂ ಇತರ ಬೋಧಕ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.