ಹೆತ್ತೂರು: ಹೋಬಳಿಯಾದ್ಯಂತ ಮುಂಗಾರು ಮಳೆ ಭಾನುವಾರದಿಂದ ಬಿರುಸುಗೊಂಡಿದೆ. ಶುಕ್ರವಾರ ತಡರಾತ್ರಿಯಿಂದಲೇ ಆರಂಭವಾದ ಮಳೆ, ಶನಿವಾರ ದಿನವಿಡೀ ಬಿಟ್ಟು ಬಿಟ್ಟು ಸುರಿಯಿತು. ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ, ಬತ್ತಿ ಹೋಗಿದ್ದ ನದಿ–ಹೊಳೆಗಳಲ್ಲಿ ನೀರಿನ ಸೆಲೆ ಬಂದಿದೆ. ಐಗೂರು ಹೊಳೆ, ಬನ್ನಹಳ್ಳಿ ಹೊಳೆ, ಕಿರ್ಕಳ್ಳಿ ಹೊಳೆ, ಅತ್ತಿಹಳ್ಳಿ ಅಬ್ಬಿ ಜಲಪಾತ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.
ಕಾಫಿ, ಏಲಕ್ಕಿ ಹಾಗೂ ಕಾಳುಮೆಣಸಿಗೆ ಸೂಕ್ತವಾಗಿರುವುದರಿಂದ ಬೆಳೆಗಾರರ ಮುಖದಲ್ಲಿ ಹರ್ಷ ಮೂಡಿದೆ. ವಿದ್ಯುತ್ ಸಂಪರ್ಕ ಇರದೇ ಬ್ಯಾಂಕ್, ಸರ್ಕಾರಿ ಕಚೇರಿ ಕೆಲಸಕ್ಕೆ ಗ್ರಾಹಕರು ಪರದಾಡುವ ಸ್ಥಿತಿ ಉಂಟಾಗಿದೆ. ವಳಲಹಳ್ಳಿ ಗ್ರಾಮದಲ್ಲಿ 4 ದಿನಗಳಿಂದ ಕರೆಂಟ್ ಇಲ್ಲದೆ ಗ್ರಾಮಸ್ಥರು ಕತ್ತಲೆಯಲ್ಲೇ ದಿನ ಕಳೆದರು.
ಸ್ಥಳೀಯ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಹಿರಿಯೂರು ಗ್ರಾಮದ ನಿಂಗಯ್ಯ ದೂರಿದರು.
ಕೃಷಿಕರಲ್ಲಿ ಉತ್ಸಾಹ
ಆಲೂರು: ಮಳೆ ಉತ್ತಮವಾಗಿ ಬೀಳುತ್ತಿರುವ ಕಾರಣ ಕೃಷಿ ಕಾರ್ಯ ಚುರುಕುಗೊಂಡಿದೆ. ಸತತ ಎರಡು ವರ್ಷಗಳಿಂದ ಬರಗಾಲದ ಬೇಗೆಗೆ ಸಿಲುಕಿ ಕೈಕಟ್ಟಿ ಕುಳಿತಿದ್ದ ರೈತರು ಈಗ ಹರ್ಷದಿಂದ ಕೃಷಿ ಕೆಲಸದಲ್ಲಿ ತಲ್ಲೀನರಾಗಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸೋನೆ ಮಳೆ ಬೀಳುತ್ತಿದೆ. ಈ ಬಾರಿಯೂ ಶುಂಠಿ ಬಿತ್ತನೆ ಮಾಡಿದ್ದಾರೆ. ಸತತವಾಗಿ ಮಳೆ ಬಂದರೆ ಶುಂಠಿ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಸ್ವಲ್ಪ ಮಳೆ ಬಿದ್ದು, ಸ್ವಲ್ಪ ದಿನ ಬಿಸಿಲಿದ್ದರೆ ಬೆಳೆಗೆ ಹದವಾದ ವಾತಾವರಣ ಉಂಟಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.