ಚನ್ನರಾಯಪಟ್ಟಣ: ಪಟ್ಟಣದ ಹಾಸನ ರಸ್ತೆಯಲ್ಲಿರುವ ಬೆಲಸಿಂದ ಪ್ರಕೃತಿ ವನವನ್ನು ₹ 1ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಸೋಮವಾರ ಬೆಲಸಿಂದ ಪ್ರಕೃತಿವನವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕೃತಿವನದ ಅಭಿವೃದ್ಧಿಗೆ ₹ 3 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. 10 ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ₹ 1 ಕೋಟಿ ಬಿಡುಗಡೆಯಾಗಿದ್ದು. ಈ ಅನುದಾನ ಜಿಲ್ಲಾಧಿಕಾರಿಗಳ ಖಾತೆಗೆ ಬಂದಿದೆ. ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಈ ಅನುದಾನವನ್ನು ಅರಣ್ಯ ಇಲಾಖೆಗೆ ಬಿಡುಗಡೆ ಮಾಡಬೇಕು’ ಎಂದರು.
‘ಇದರಲ್ಲಿ ಪ್ರಕೃತಿವನದಲ್ಲಿ ಮಾಹಿತಿ ಫಲಕ, ಪ್ರವೇಶ ದ್ವಾರ, ಮಕ್ಕಳ ಆಟದ ಉದ್ಯಾನ, ವಾಯುವಿಹಾರ, ಅರಣ್ಯ ಮಾಹಿತಿಕೇಂದ್ರ, ಶಿವನ ವಿಗ್ರಹದ ಸುತ್ತಲಿನ ಜಾಗದ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಬಯಲುರಂಗ ಮಂದಿರ, ವಿದ್ಯುದ್ದೀಪ ಅಳವಡಿಸುವುದು ಹಾಗೂ ಕುಡಿಯುವ ನೀರು ಸೇರಿದಂತೆ ಅನೇಕ ಸೌಕರ್ಯ ಒದಗಿಸಲಾಗುವುದು’ ಎಂದು ಹೇಳಿದರು.
‘ಹಣ ಬಿಡುಗಡೆ ಮಾಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.
ಬೆಲಸಿಂದ ಪ್ರಕೃತಿವನವನ್ನು ಅಭಿವೃದ್ಧಿಪಡಿಸಲು ಹೆಚ್ಚುವರಿಯಾಗಿ ₹ 2 ಕೋಟಿ ಅಗತ್ಯವಿದೆ’ ಎಂದು ಅವರು ಹೇಳಿದರು. ವಲಯ ಅರಣ್ಯಾಧಿಕಾರಿ ಹೇಮಂತ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಪುಟ್ಟಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.