ADVERTISEMENT

ಏಕರೂಪ ಸಮವಸ್ತ್ರ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:15 IST
Last Updated 9 ಸೆಪ್ಟೆಂಬರ್ 2017, 5:15 IST

ಹಾವೇರಿ: ‘ಕಾಲೇಜಿನಲ್ಲಿ ಏಕರೂಪದ ಸಮವಸ್ತ್ರ ಕಡ್ಡಾಯಗೊಳಿಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್  (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಇಲ್ಲಿನ ಹೊಸಮನಿ ಸಿದ್ದಪ್ಪನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಸಂಚಾಲಕ ಕಿರಣ ಕೊಣವರ, ‘ಹಿರೇಕೆರೂರ ಬಿ.ಆರ್‌.ತಂಬಾಕದ ಕಾಲೇಜಿನಲ್ಲಿ ಏಕರೂಪದ ಸಮವಸ್ತ್ರ ಜಾರಿಗೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಹಾಗೂ ಎಬಿವಿಪಿ ಕಾರ್ಯಕರ್ತರ ಮೇಲೆ ಕಾಲೇಜು ಆಡಳಿತ ಮಂಡಳಿಯವರು ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸಿದ್ದಾರೆ. ಇದರು ಖಂಡನೀಯ’ ಎಂದರು.

ಅಲ್ಲದೇ, ‘ಸಿಪಿಐ ಸಂಗನಾಥ ಅವರು ಅಸಭ್ಯವಾಗಿ ವರ್ತಿಸಿದ್ದಾರೆ.  ವೆಂಕಟೇಶ ಡಾಂಗೆ, ಕುಮಾರ ಕಲ್ಲಾಪುರ, ಅಕ್ಷಯ ಮೇದಾರ, ಸಂತೋಷ ಮಡಿವಾಳರ ಹಾಗೂ ಮನು ಬಿ. ಅವರನ್ನು ವಶಕ್ಕೆ ಪಡೆದ್ದಿದರು. ಉಳಿದ ವಿದ್ಯಾರ್ಥಿಗಳನ್ನು ಲಾಠಿ ಪ್ರಹಾರ ಮಾಡಿ ಚದುರಿಸಿದರು. ಆದ್ದರಿಂದ ಅವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.\

ADVERTISEMENT

‘ಈ ಘಟನೆಯ ಬಳಿಕ ತಂಬಾಕದ ಕಾಲೇಜಿಗೆ ಏಕಾಏಕಿ ಐದು ದಿನ ರಜೆ ಘೋಷಿಸಲಾಗಿದೆ. ಇದರಿಂದ ವಿದ್ಯಾರ್ಥಿ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಏಕರೂಪದ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಇದೇ ಕಾಲೇಜಿನಲ್ಲಿ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪದ ಸಮವಸ್ತ್ರವನ್ನು ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಆದರೆ ಈ ವರೆಗೂ ಜಾರಿಗೊಳಿಸಿಲ್ಲ’ ಎಂದು ದೂರಿದರು.

ವಿದ್ಯಾರ್ಥಿನಿ ಸೃಷ್ಟಿ ನೆಲವಾಗಿಲ ಮಾತನಾಡಿ, ‘ಸರ್ಕಾರ ಎಲ್ಲ ಕಾಲೇಜು ಗಳಲ್ಲಿ ಏಕರೂಪದ ಸಮವಸ್ತ್ರವನ್ನು ಜಾರಿಗೊಳಿಸಿದೆ. ಆದರೆ, ಹಿರೇಕೆರೂರ ಬಿ.ಆರ್‌. ತಂಬಾಕದ ಕಾಲೇಜಿನಲ್ಲಿ ಮಾತ್ರ ಅದನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.

ಎಬಿವಿಪಿ ಜಿಲ್ಲಾ ಸಹಸಂಚಾಲಕ ವೆಂಕಟೇಶ ಡಾಂಗೆ ಮಾತನಾಡಿ, ‘ಕಾಲೇ ಜಿನಲ್ಲಿ ಏಕರೂಪ ಸಮವಸ್ತ್ರ ಜಾರಿಗೊ ಳಿಸಬೇಕೆಂದು, ಹಲವು ಬಾರಿ ಬಿ.ಆರ್‌. ತಂಬಾಕದ ಕಾಲೇಜಿನ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು. ಸಿದ್ದು ಹಾವಳಗಿ, ಸಿದ್ದು ಸಾಲಿಮಠ, ನವೀನಗೌಡ ಪಾಟೀಲ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.