ರಾಣೆಬೆನ್ನೂರು: ‘ಕಬಡ್ಡಿಯನ್ನು ಗ್ರಾಮೀಣ ಮಟ್ಟದಲ್ಲಿ ಬೆಳೆಸಲು ಹಾಗೂ ಗ್ರಾಮೀಣ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪಿ.ಕೆ.ಕೆ ಇನ್ಸಿಯೇಟಿವ್ಸ್ ಸಂಸ್ಥೆಯಿಂದ ಮೇ 15 ರಿಂದ ಮೇ 23 ರವರೆಗೆ ರಾಣೆಬೆನ್ನೂರು ತಾಲ್ಲೂಕಿನ ಐದು ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪಿಯಲ್ಲಿ ಕಬ್ಬಡಿ ಪಂದ್ಯಾವಳಿ ನಡೆಸಲಾಗುವುದು’ ಎಂದು ಪಿಕೆಕೆ ಇನ್ಸಿಯೇಟಿವ್ಸ್ ಅಧ್ಯಕ್ಷ ಪ್ರಕಾಶ ಕೋಳಿವಾಡ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲ ಬಹುಮಾನ ₹10 ಸಾವಿರ, ದ್ವಿತೀಯ ಬಹುಮಾನ ₹5 ಸಾವಿರ ಇದೆ. ಕ್ರೀಡಾಪಟುಗಳು 18 ರಿಂದ 35 ವರ್ಷ ವಯೋಮಿತಿ ಹೊಂದಿರಬೇಕು. ಆಧಾರ್ ಕಾರ್ಡ್ ಕಡ್ಡಾಯ. ಆಯಾ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಒಳಪಟ್ಟ ಹಳ್ಳಿಗಳ ಕ್ರೀಡಾ ಪಟುಗಳಿಗೆ ಮಾತ್ರ ಅವಕಾಶವಿದೆ’ ಎಂದು ವಿವರಿಸಿದರು.
ಹಲಗೇರಿ ಜಿಲ್ಲಾ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಹಳ್ಳಿಗಳ ಪಂದ್ಯವು ಮೇ19ರಂದು, ತುಮ್ಮಿನಕಟ್ಟಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 21ರಂದು ಹಾಗೂ ಕಾಕೋಳ ಮತ್ತು ಜೋಯಿಸರ ಹರಳಹಳ್ಳಿ ಜಿಲ್ಲಾ ಪಂಚಾಯ್ತಿಗೆ ಸೇರಿದ ತಂಡಗಳ ನೂಕಾಪುರದಲ್ಲಿ ಮೇ 23ರಂದು
ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು. ಮಾಹಿತಿಗೆ ಪ್ರಧಾನ ವ್ಯವಸ್ಥಾಪಕ ಗಂಗಾಧರ ಬಣಕಾರ 9972985168 ಅವರನ್ನು ಸಂಪರ್ಕಿಸಬಹುದು. ನಗರಸಭೆ ಸದಸ್ಯ ಬಸವರಾಜ ಹುಚಗೊಂಡರ, ಪುಟ್ಟಪ್ಪ ಮರಿಯಮ್ಮನವರ, ಗಂಗಾಧರ ಬಣಕಾರ, ಎಂ.ಕೆ.ಮೊಹಿಯುದ್ದೀನ, ಇಕ್ಬಾಲ್ ನೂಕಾಪುರ, ಶಿವಯೋಗಿ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.