ADVERTISEMENT

‘ಟೀಕೆ ಪರಾಮರ್ಶೆ ಜಾಣ್ಮೆ ಜನರಲ್ಲಿದೆ’

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮನೋಹರ ತಹಸೀಲ್ದಾರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:24 IST
Last Updated 3 ಫೆಬ್ರುವರಿ 2017, 6:24 IST
‘ಟೀಕೆ ಪರಾಮರ್ಶೆ ಜಾಣ್ಮೆ ಜನರಲ್ಲಿದೆ’
‘ಟೀಕೆ ಪರಾಮರ್ಶೆ ಜಾಣ್ಮೆ ಜನರಲ್ಲಿದೆ’   

ಹಾನಗಲ್: ‘ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆ ಮೂಲಕ ಘೋಷಿಸಲಾಗಿದ್ದ 160 ಭರವಸೆಗಳ ಪೈಕಿ ಈಗಾಗಲೇ 120 ಅಂಶಗಳನ್ನು ಪೂರೈಸಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ವಿರೋಧಿಗಳ ಟೀಕೆಗಳನ್ನು ತುಲನೆ ಮಾಡುವ ಜಾಣ್ಮೆ ಜನರಲ್ಲಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.

ಬುಧವಾರ ತಾಲ್ಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ₹9.75 ಲಕ್ಷದ ಕಾಂಕ್ರೀಟ್‌ ರಸ್ತೆ ಕಾಮಗಾರಿ, ₹12 ಲಕ್ಷದ ಅಂಬೇಡ್ಕರ ಭವನ, ₹2 ಲಕ್ಷ ವೆಚ್ಚದ ಮಾತಂಗೆವ್ವ ದೇವಸ್ಥಾನ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕಾಮನಹಳ್ಳಿ ಗ್ರಾಮಕ್ಕೆ ಸಂಪರ್ಕದ ರಸ್ತೆಯನ್ನು ₹1.26 ಕೋಟಿಯಲ್ಲಿ ಡಾಂಬರೀಕಣ ಮಾಡಲಾಗಿದೆ. ಈ ಗ್ರಾಮದ ಕೆರೆಗೆ ಧರ್ಮಾ ಕಾಲುವೆಯ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಿದ್ದರಿಂದ ಪ್ರಸ್ತುತ ಬರದ ಬೇಸಿಗೆಯಲ್ಲೂ ಸಾಕಷ್ಟು ನೀರು ಕೆರೆಯಲ್ಲಿ ಸಂಗ್ರಹವಾಗಿದೆ’ ಎಂದರು.

ಗ್ರಾಮದ ಬಹುತೇಕ ರಸ್ತೆಗಳು ಕಾಂಕ್ರೀಟ್  ಮೂಲಕ ಸುಧಾರಣೆಗೊಂಡಿದ್ದು, ಇನ್ನುಳಿದ ಕೆಲವು ಕಾಲೊನಿಗಳ ರಸ್ತೆ ಸುಧಾರಣೆಯ ನಂತರ ಈ ಗ್ರಾಮವು ತಾಲ್ಲೂಕಿನಲ್ಲಿ ಅಭಿವೃದ್ಧಿಯ ಮಟ್ಟಿಗೆ ಮಾದರಿ ಗ್ರಾಮವಾಗಲಿದೆ ಎಂದರು.

‘ಕಾಮನಹಳ್ಳಿ ಗ್ರಾಮಸ್ಥರು ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾಗುವುದು ಎಲ್ಲ ಗ್ರಾಮಗಳ ಜನರಿಗೆ ಮಾದರಿ ಎನ್ನಿಸುವಂತಿದೆ. ಇಂತಹ ಸಂಪ್ರದಾಯ ಬೆಳೆಯಬೇಕು, ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು. ಜಾತಿಯ ತಾರತಮ್ಯವಿಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ಜನಪ್ರತಿನಿಧಿಗಳು ತೊಡಗಿಕೊಳ್ಳಬೇಕು’ ಎಂದು ಈ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌ ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಶೋಧಾ ಮಹೇಶ ಹವಳಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸರಳಾ ಜಾಧವ, ಸದಸ್ಯೆ ಸರೋಜಾ ಹೊಸಮನಿ, ಸ್ಥಳೀಯ ಮುಖಂಡರಾದ ಚಿಕ್ಕಪ್ಪ ಹೊಸಮನಿ, ಲಲಿತಾ ಆನವಟ್ಟಿ, ಮಖಬೂಲ ಶಿವಪೂರ, ಮಂಜುನಾಥ ಕಣವಿ, ಬಸಪ್ಪ ಹೊಸಮನಿ, ಫಕ್ಕೀರಪ್ಪ ಮಲ್ಲಿಗಾರ, ವಿಷ್ಣುಕಾಂತ ಜಾಧವ ಮತ್ತು ಪಿಡಬ್ಲುಡಿ ಎಂಜನಿಯರ್‌ ಮಹಾಬಲೇಶ್ವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.