ADVERTISEMENT

ನರೇಗಾ ಅಡಿ ಕಳಪೆ ಸಾಧನೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:14 IST
Last Updated 20 ಏಪ್ರಿಲ್ 2017, 9:14 IST

ಹಿರೇಕೆರೂರ: ಬರಗಾಲದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡ­ಬೇಕೆಂದು ಸರ್ಕಾರ ಆದೇಶ ನೀಡಿದ್ದರೂ ಪಿಡಿಓಗಳು ಸರಿಯಾಗಿ ಕೆಲಸ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಶಾಸಕ ಯು.ಬಿ.ಬಣಕಾರ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ 2017–18ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಅತ್ಯಂತ ಕಳಪೆ ಸಾಧ­ನೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ತಾಲ್ಲೂಕಿಗೆ 35,311 ಮಾನವ ದಿನಗ­ಳನ್ನು ನಿಗದಿ ಮಾಡಿದ್ದು ಈ ದಿನದ ಇಲ್ಲಿ­ಯವರೆಗೂ ಕೇವಲ 2679 ಮಾನವ ದಿನಗಳನ್ನು ಮಾತ್ರ ಸೃಷ್ಟಿಮಾಡಿ­ದ್ದಾರೆ.  14 ಗ್ರಾಮ ಪಂಚಾಯ್ತಿಗಳಲ್ಲಿ ಇಲ್ಲಿವರೆಗೆ ಶೂನ್ಯ ಸಾಧನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

14 ಗ್ರಾಮ ಪಂಚಾಯ್ತಿಯಲ್ಲಿ ನೂರ­ಕ್ಕಿಂತ ಕಡಿಮೆ ಮಾನವ ದಿನಗಳನ್ನು ಸೃಷ್ಟಿಸಿದ್ದಾರೆ. ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದ ಕಾರಣ ಸರ್ಕಾರ ಪ್ರತಿ ನಿತ್ಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವ ಒತ್ತಡವನ್ನು ಹಾಕಿದ್ದರೂ ಸಹಪಿಡಿಓಗಳ ಅಸಹಕಾರದಿಂದಕಾಮಗಾರಿ ಪ್ರಾರಂಭವಾಗುತ್ತಿಲ್ಲ ಎಂದು ಹೇಳಿದರು.ಸಭೆಯಲ್ಲಿ ಹಾಜರಿದ್ದ ಎಮ್ಮಿಗನೂರು ಹಾಗೂ ದಾಸನಕೊಪ್ಪ ಗ್ರಾಮದ ಕೂಲಿ­ಕಾರರಿಗೆ ಏ. 1ರಿಂದ ಇಲ್ಲಿವರೆಗೂ ಕೂಲಿ ಕೆಲಸ ಕೊಟ್ಟಿಲ್ಲ ಎಂದು ಆ ಗ್ರಾಮಗಳ ಕೂಲಿ ಕಾರ್ಮಿಕರು ಸಭೆಯ ಗಮನಕ್ಕೆ ತಂದರು. ಆಗ ಶಾಸಕರು ಸಭೆಯಲ್ಲಿ ಹಾಜರಿದ್ದ ಕಚವಿ ಹಾಗೂ ಸಾತೇನಹಳ್ಳಿ ಪಿಡಿಓಗಳಿಗೆ ಶುಕ್ರವಾರದ ಒಳಗಾಗಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಜನತೆ ಗುಳೆ ಹೋಗದಂತೆ ಅವರಿಗೆ ಕೆಲಸ ನೀಡಬೇಕು ಎಂಬುದು ನಮ್ಮ ಕಳಕಳಿಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಮುಂದುವರಿದಲ್ಲಿ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕೂಲಿಕಾರರು ಎಚ್ಚರಿಕೆ ನೀಡಿದರು.ಕಾರ್ಯನಿರ್ವಾಹಕ ಅಧಿಕಾರಿ ಏ. 24ರ ಒಳಗೆ ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲಿ ಸಮುದಾಯ ಆಧಾರಿತ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಪಿಡಿಓಗಳ ಹಾಗೂ ಅವರಿಂದ ಕೆಲಸ ಪಡೆಯಲು ವಿಫಲ­ರಾದ ಕಾರ್ಯನಿರ್ವಾಹಕ ಅಧಿಕಾರಿಯ ಮೇಲೆ ಶಿಸ್ತು ಕ್ರಮಕ್ಕಾಗಿಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಉಪಾಧ್ಯಕ್ಷ ಬಂಗಾರೆಪ್ಪ ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶಿವ­ರಾಜ ಹರಿಜನ, ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜು ಬಣಕಾರ, ರಟ್ಟೀಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸ್ ಹದಡೇರ, ಕೂಲಿ ಕಾರ್ಮಿಕರು, ಪಿಡಿಓಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.