ರಾಣೆಬೆನ್ನೂರು: ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ತಾಲ್ಲೂಕಿನ ಹರನಗಿರಿ ಗ್ರಾಮದ ಯುವ ಜೋಡಿಯ ಕುಟುಂಬದವರ ಮನವೊಲಿಸಿದ ಪೊಲೀಸರು, ಮಂಗಳವಾರ ವಿವಾಹ ನೋಂದಣಿ ಮಾಡಿಸಿದ್ದಾರೆ.
ಹರನಗಿರಿ ಗ್ರಾಮದ ನವೀನ ಹುಣಸಿಕಟ್ಟಿ ಮತ್ತು ದೀಪಾ ಪಾಟೀಲ ಪ್ರೀತಿಸಿ ಆಗಸ್ಟ್ 17ರಂದು ಹರಿಹರಕ್ಕೆ ತೆರಳಿದ್ದರು. ಬಳಿಕ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡು ಊರಿಗೆ ಬಂದಿದ್ದರು. ಬಳಿಕ ತಮಗೆ ಜೀವ ರಕ್ಷಣೆ ನೀಡುವಂತೆ ಗ್ರಾಮೀಣ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು.
ಇಬ್ಬರ ಪೋಷಕರು ಹಾಗೂ ಕುಟುಂಬದವರನ್ನು ಠಾಣೆಗೆ ಕರೆಯಿಸಿಕೊಂಡು ಮನವೊಲಿಸಿದ ಪೊಲೀಸರು, ರಕ್ಷಣೆ ನೀಡುವಂತೆ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಬಳಿಕ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯುವ ದಂಪತಿ, ‘ನಾವಿಬ್ಬರೂ ಪರಸ್ಪರ ಪ್ರೀತಿಸಿದ್ದೆವು. ಹೀಗಾಗಿ ಈಚೆಗೆ ಹರಿಹರದ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಊರಿಗೆ ವಾಪಸ್ ಬಂದಾಗ ಆತಂಕ ಮೂಡಿತ್ತು. ಅದಕ್ಕಾಗಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ರಕ್ಷಣೆ ಕೇಳಿದ್ದೆವು. ಪೊಲೀಸರು ನಮ್ಮಿಬ್ಬರ ಕುಟುಂ ಬದ ಹಿರಿಯರ ಮನವೊಲಿಸಿ, ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.