ರಾಣೆಬೆನ್ನೂರು: ‘ಪ್ರತಿ ಬಡ ಕುಟುಂಬಗಳು ಕಡಿಮೆ ದರದಲ್ಲಿಯೇ ಉತ್ತಮ ಗುಣಮಟ್ಟದ ಔಷಧಗಳು ಪಡೆಯಲಿ ಎಂಬ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನೌಷಧ ಕೇಂದ್ರಗಳನ್ನು ತೆರೆಯುತ್ತಿದ್ದಾರೆ’ ಎಂದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಇಲ್ಲಿನ ವಾಗೀಶ ನಗರದ ವೀರಭದ್ರೇಶ್ವರ ವಾಣಿಜ್ಯ ಮಳಿಗೆಯಲ್ಲಿ ಇತ್ತೀಚೆಗೆ ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ವನ್ನು ಉದ್ಘಾಟಿಸಿದರು ಅವರು ಮಾತನಾಡಿದರು.
‘ದೇಶದ ಪ್ರತಿಯೊಬ್ಬ ನಾಗರಿಕನಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಲಭಿಸಬೇಕು. ಜನೌಷಧ ಕೇಂದ್ರಗಳಲ್ಲಿ ಖಾಸಗಿಯವರಿಗಿಂತ ಶೇ 70ರಷ್ಟು ಕಡಿಮೆ ದರದಲ್ಲಿ ಔಷಧಗಳು ಸಿಗಲಿವೆ’ ಎಂದರು. ‘ದುಬಾರಿ ಔಷಧಗಳು ಮಾತ್ರ ಖಾಯಿಲೆಯನ್ನು ಗುಣಪಡಿಸುತ್ತವೆ ಎಂಬುದು ಶುದ್ಧ ಸುಳ್ಳು. ಜನೌಷಧ ಕೇಂದ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಔಷಧಗಳನ್ನೇ ವಿತರಿಸಲಾಗುತ್ತಿದೆ’ ಎಂದರು.
‘ಸರ್ಕಾರಿ ಮತ್ತು ಖಾಸಗಿ ವೈದ್ಯರು ಜನೌಷಧ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂದಾಗ ಮಾತ್ರ ಪ್ರತಿಯೊಬ್ಬ ಬಡವನಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳು ಲಭಿಸುತ್ತವೆ’ ಎಂದು ಅಭಿಪ್ರಾಯಪಟ್ಟರು. ‘2015ರಲ್ಲಿ ಪಂಜಾಬ್ನಲ್ಲಿ ಮೊದಲ ಜನೌಷಧ ಕೇಂದ್ರ ತೆರೆಯಲಾಗಿತ್ತು. ಆ ಬಳಿಕ ದೇಶದ 650 ಜಿಲ್ಲೆಗಳಲ್ಲಿ ಒಟ್ಟು 2,800 ಕೇಂದ್ರಗಳು ತೆರೆಯಲಾಯಿತು’ ಎಂದು ಮಾಹಿತಿ ನೀಡಿದರು. ಹುಬ್ಬಳ್ಳಿಯ ಪರಶುರಾಮ ಕೆಂಚರಡ್ಡಿ ಮಾತನಾಡಿದರು.
ಸನ್ಮಾನ: ಡಾ.ಎಸ್.ಸಿ.ಬೆಂಗಳೂರ, ಡಾ.ಬಿ.ಎಸ್.ಕರ್ಜಗಿ, ಡಾ.ನಾಗರಾಜ ದೊಡ್ಡಮನಿ ಹಾಗೂ ಡಾ.ಬಿ.ಎಸ್.ಅಂಗಡಿ ಅವರನ್ನು ಸಂಸದ ಶಿವಕುಮಾರ ಉದಾಸಿ ಸನ್ಮಾನಿಸಿದರು. ಮಲ್ಲಿಕಾರ್ಜುನ ಅಂಗಡಿ, ವಿನಯ ಲಿಂಗನಗೌಡ್ರ, ವೀರಣ್ಣ ಅಂಗಡಿ, ಜಿ.ಜಿ.ಹೊಟ್ಟಿಗೌಡ್ರ, ಬಸವರಾಜ ಹುಲ್ಲತ್ತಿ, ಎಸ್.ಎಸ್.ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ಅರುಣಕುಮಾರ ಪೂಜಾರ, ಭಾರತಿ ಜಂಬಿಗಿ, ಬಸವರಾಜ ತಾವರಗೊಂದಿ, ಚಂದ್ರಪ್ಪ ಸೊಪ್ಪಿನ, ಮಂಜುಳಾ ಹತ್ತಿ, ಚನ್ನಮ್ಮ ಗುರುಪಾದದೇವರಮಠ, ವಸಂತಾ ಹುಲ್ಲತ್ತಿ ಹಾಗೂ ಗೀತಾ ಜಂಬಿಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.