ADVERTISEMENT

‘ಸಾಧನೆಗೆ ಶ್ರಮ,ಗುರು,ಗುರಿ ಮುಖ್ಯ’

ಸ್ವಾಮಿ ವಿವೇಕಾನಂದ 154ನೇ ಜಯಂತಿ ನಿಮಿತ್ತ ‘ರಾಷ್ಟ್ರೀಯ ಯುವ ಸಪ್ತಾಹ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 5:59 IST
Last Updated 13 ಜನವರಿ 2017, 5:59 IST
ಹಾವೇರಿ: ‘ಶ್ರದ್ಧೆ, ಸತತ ಪರಿಶ್ರಮ, ಆದರ್ಶ ಗುರು, ಉತ್ತಮ ಗುರಿ ಹೊಂದಿದ ಯುವಜನತೆ ಸಾಧನೆ ಮಾಡಲು ಸಾಧ್ಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ ಯೋಗೇಶ ಹೇಳಿದರು.
 
ಸ್ವಾಮಿ ವಿವೇಕಾನಂದರ 154ನೇ ಜಯಂತಿ ನಿಮಿತ್ತ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಆಯೋಜಿಸಲಾದ ‘ರಾಷ್ಟ್ರೀಯ ಯುವ ಸಪ್ತಾಹ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಸಮಾಜದಲ್ಲಿ ಎಲ್ಲರೂ ಗೌರವದಿಂದ ಬಾಳಬೇಕು. ಅಂತಹ ಬದುಕು ರೂಢಿಸಿಕೊಳ್ಳಬೇಕು. ಅದಕ್ಕಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದ ಅವರು, ‘ಯಾರೂ ಬಲಾಢ್ಯರನ್ನು ಕೆಣಕುವುದಿಲ್ಲ, ಅದಕ್ಕಾಗಿ ನಾವು ಮಾನಸಿಕ, ದೈಹಿಕವಾಗಿ  ಸದೃಢರಾಗಬೇಕು. ಆಗ ನಮಗೆ ಯಾರೂ ಮೋಸ ಮಾಡಲು ಸಾಧ್ಯವಾಗುವುದಿಲ್ಲ’ ಎಂದರು. 
 
‘ಸಾಧನೆ ಮಾಡಲು ಅಸಾಧ್ಯವಾದವರು, ‘ಅನ್ಯಮಾರ್ಗ’ವನ್ನು  ಹಿಡಿಯುತ್ತಾರೆ’ ಎಂದ ಅವರು, ‘ಅಡ್ಡ ಮಾರ್ಗ ಹಿಡಿದವರು, ಮನದಲ್ಲಿ ಸ್ವಾರ್ಥ ತುಂಬಿದವರು ದೇವರಿಗೆ ಎಷ್ಟೇ ಪೂಜೆ ಮಾಡಿದರೂ ಪ್ರಯೋಜನ ಇಲ್ಲ ’ ಎಂದರು.
 
ಉಪ ವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ ಮಾತನಾಡಿ, ‘ಯುವಕರೇ ದೇಶದ ಸಂಪತ್ತು. ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸುತ್ತಾರೆ. ಆದ್ದರಿಂದ, ಯುವಕರು ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು’ ಎಂದರು. 
 
‘ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ. ವಿಶ್ವವೇ ಭಾರತದೆಡೆ ಮುಖ ಮಾಡಿ ನೋಡುತ್ತಿದೆ’ ಎಂದರು. 
 
‘ಸಮಾಜದಲ್ಲಿ ಗುರುಹಿರಿಯರನ್ನು ಗೌರವಿಸುವ ಹಾಗೂ ಪ್ರೀತಿಯಿಂದ ಕಾಣುವ ಗುಣಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಧನೆ ಮಾಡುವ ಬಗ್ಗೆ ದೃಢ ನಿರ್ಧಾರ ಮಾಡಬೇಕು’ ಎಂದರು. 
 
‘ಪ್ರತಿಯೊಬ್ಬರು ಒಂದಾದರು ಸಾಧನೆ ಮಾಡಬೇಕು, ಇಲ್ಲವಾದರೆ ಅವರಿಗೆ ಸಮಾಜದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ'  ಎಂದರು.
 
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ದೇಶದ ಯುವಕರ ಬದುಕು ಹಾಗೂ ಸಾಧನೆಗಳಿಗೆ ಸ್ವಾಮಿ ವಿವೇಕಾನಂದರು ಮಾರ್ಗದರ್ಶನ ಆಗಿದ್ದಾರೆ’ ಎಂದರು. 
 
ಸ್ವಾಮಿ ವಿವೇಕಾನಂದರ 154ನೇ ಜಯಂತಿ ನಿಮಿತ್ತ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ಸಪ್ತಾಹ’ ಜಾಗೃತಿ ಜಾಥಾಕ್ಕೆ ಜಿಲ್ಲಾ ಉಸ್ತುವಾರಿ  ಸಚಿವ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.
 
ತಹಶೀಲ್ದಾರ್‌ ಜೆ.ಬಿ,ಮಜ್ಜಗಿ, ನಗರಸಭೆ ಪೌರಾಯುಕ್ತ ಶಂಕರ ಬಾರ್ಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಜಿಲ್ಲಾ ವಾರ್ತಾಧಿಕಾರಿ ರಂಗನಾಥ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಎಂ.ಆಂಜನೆಯ ಮತ್ತಿತರರು ಇದ್ದರು.
 
***
ಕುಸಿಯುತ್ತಿದೆ ಶಿಕ್ಷಣದ ಗುಣಮಟ್ಟ?
ರಾಣಿಬೆನ್ನೂರಿನ ರಾಮಕೃಷ್ಣಾಶ್ರಮದ ಅಧ್ಯಕ್ಷ ಪ್ರಕಾಶಾನಂದಜೀ ಮಾತನಾಡಿ, ‘ಯುವಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಡೀ ವಿಶ್ವದಲ್ಲೇ ‘ರಾಷ್ಟೀಯ  ಯುವ ಸಪ್ತಾಹ’ವನ್ನು ಯುನೆಸ್ಕೋ ಆಚರಿಸುತ್ತಿದೆ.  ವಿವೇಕಾನಂದರು ಯುವಕರಿಗೆ ಅತ್ಯಂತ ಸ್ಫೂರ್ತಿಯ ಸೆಲೆ,  ಜೀವನದಲ್ಲಿ ಹತಾಶರಾದವರು, ವಿವೇಕಾನಂದರ ಬಗ್ಗೆ ಓದಬೇಕು’ ಎಂದರು. 
 
‘ಉನ್ನತ ಶಿಕ್ಷಣ ಪಡೆದವರೇ ಭ್ರಷ್ಟಾಚಾರಿಗಳು ಹಾಗೂ ಉಗ್ರಗಾಮಿಗಳಾಗುತ್ತಿದ್ದಾರೆ, ನಮ್ಮ ಸರ್ಕಾರಗಳ  ಶಿಕ್ಷಣದ ಗುಣಮಟ್ಟ ಅಷ್ಟು ಕೀಳುಮಟ್ಟಕ್ಕಿಳಿದಿದೆ ಎಂದೇ ಭಾವಿಸಬೇಕಾಗುತ್ತದೆ. ಪಠ್ಯದಲ್ಲಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಬೇಕು’ ಎಂದರು.
 
**
ಸಮಾಜದಲ್ಲಿ ಆಚಾರ, ವಿಚಾರಗಳು ಕ್ಷೀಣಗೊಂಡಾಗ ಮಹಿಳೆಯ ಮೇಲೆ ದೌರ್ಜನ್ಯ, ಬಲತ್ಕಾರಗಳು ಹೆಚ್ಚಾಗುತ್ತವೆ
-ಪ್ರಕಾಶಾನಂದಜೀ
ರಾಮಕೃಷ್ಣಾಶ್ರಮ, ರಾಣೆಬೆನ್ನೂರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.