ಕಲಬುರ್ಗಿ: ಅಫಜಲಪುರ ತಾಲ್ಲೂಕು ದೇವಲಗಾಣಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ. ಅಮಿತ್ಕುಮಾರ ಅವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸು ವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಮಾನವ ಸರಪಳಿ ನಿರ್ಮಿಸಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
ದೇವಲಗಾಣಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ಗುತ್ತೇದಾರ ಹಾಗೂ ಅವರ ತಂದೆ ಮಹಾದೇವ ಗುತ್ತೇದಾರ ಅವರು ಅಮಿತ್ಕುಮಾರ ಅವರನ್ನು ಕಲಬುರ್ಗಿಯಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ. ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಅಪಮಾನ ಮಾಡಿದ್ದಾರೆ. ಕೊಲೆ ಬೆದರಿಕೆ ಕೂಡ ಒಡ್ಡಿದ್ದಾರೆ. ಆದ್ದರಿಂದ ಮಹೇಶ ಹಾಗೂ ಮಹಾದೇವ ಗುತ್ತೇದಾರ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮಹೇಶ ಗುತ್ತೇದಾರ ಅವರ ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಮಿತ್ಕುಮಾರ ವಿರುದ್ಧ ನೀಡಿರುವ ಪ್ರತಿ ದೂರನ್ನು ಹಿಂಪಡೆಯಬೇಕು. ಅಮಿತ್ಕುಮಾರ ಅವರಿಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಜಾಹ್ನವಿ, ಆರೋಪಿಗಳ ಬಂಧಿಸುವ ಭರವಸೆ ನೀಡಿದರು. ಸಮಿತಿ ಅಧ್ಯಕ್ಷ ವಿಠಲ ದೊಡ್ಡಮನಿ, ಸದಸ್ಯರಾದ ಸೂರ್ಯಕಾಂತ ನಿಂಬಾಳಕರ್, ಸಂತೋಷ ಮೇಲ್ಮನಿ, ಅನೀಲ್ ಟೆಂಗಳಿ, ಮಾಜಿ ಮೇಯರ್ ಸೋಮಶೇಖರ ಮೇಲಿನಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.