ADVERTISEMENT

‘ತ್ರಿಕಾಲ ಜ್ಞಾನಿ ಸರ್ವಜ್ಞ ಮಾದರಿ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:58 IST
Last Updated 17 ಮಾರ್ಚ್ 2018, 9:58 IST

ಶಹಾಬಾದ: ‘ತ್ರಿಕಾಲ ಜ್ಞಾನಿಯಾಗಿ ವಾಸ್ತವ ಅರಿತು, ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ ಇಂದಿಗೂ ಅಜರಾಮರ’ ಎಂದು ಭಂಕೂರ ಶಾಂತನಗರದ ಬಸವ ಸಮಿತಿಯ ಅಧ್ಯಕ್ಷ ಅಮೃತ ಮಾನಕರ್ ಹೇಳಿದರು.

ತಾಲ್ಲೂಕಿನ ಭಂಕೂರ ಗ್ರಾಮದ ಕೋರಿಸಿದ್ಧೇಶ್ವರ ಟ್ಯೂಶನ್ ಸೆಂಟರ್‌ನಲ್ಲಿ ಈಚೆಗೆ ನಡೆದ ಸರ್ವಜ್ಞ ಜಯಂತಿ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯೆ, ಜಾತಿ, ಕೃಷಿ, ಮಾತು, ದುಶ್ಚಟಗಳ ಕುರಿತು ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ವಚನಗಳು ನಮಗೆ ಜ್ಞಾನದ ದಾರಿ ದೀಪವಿದ್ದಂತೆ. ವಚನ ಪಚನ ಮಾಡಿಕೊಂಡರೆ ಸುಂದರ ಸಮಾಜ ಸೃಷ್ಟಿ ಸಾಧ್ಯ’ ಎಂದರು.

ADVERTISEMENT

ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ ಮಾತನಾಡಿ, ‘ವಿದ್ಯಾರ್ಥಿಗಳು ಶಿಸ್ತು ಸಂಯಮ, ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳ ಬೇಕು. ವಿದ್ಯಾರ್ಥಿ ಜೀವನ ಕಾಲಹರಣ ಮಾಡುವ ಅವಧಿ ಅಲ್ಲ. ಮಹತ್ತರ ಜವಾಬ್ದಾರಿ ನಿರ್ವಹಿಸುವ ಕಾಲ. ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಸಮಯ. ವಿದ್ಯಾರ್ಥಿಗಳು ಹೊಣೆಗಾರಿಕೆಯಿಂದ ವಿದ್ಯೆ ಕಲಿತು ಸಮಾಜಕ್ಕೆ ಉಪಯುಕ್ತವಾಗಿ ಬೆಳೆಯ ಬೇಕು’ ಎಂದು ಸಲಹೆ ನೀಡಿದರು.

ಬಸವ ಸಮಿತಿಯ ಸದಸ್ಯ ನೀಲಕಂಠ ಮುಧೋಳಕರ್, ಕುಂಬಾರ ಸಮಾಜದ ಅಧ್ಯಕ್ಷ ಸಿದ್ದಪ್ಪ ಕುಂಬಾರ ಇದ್ದರು. ಮರಲಿಂಗ ಯಾದಗಿರಿ ಪ್ರಾಸ್ತಾವಿಕ ಮಾತನಾಡಿದರು. ಶಶಿಕಾಂತ ಮಡಿವಾಳ ನಿರೂಪಿಸಿದರು. ಹಣಮಂತ ಕುಂಬಾರ ಸ್ವಾಗತಿಸಿದರು. ದೇವು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.